ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರೋ ಇಂಡಿಯಾ ವೇದಿಕೆಯಲ್ಲಿ ಕನ್ನಡ ಕಣ್ಮರೆ: ನಮ್ಮ ನೆಲದಲ್ಲೇ ಅಪಚಾರ ಎಂದ ಎಚ್‌ಡಿಕೆ

Last Updated 3 ಫೆಬ್ರುವರಿ 2021, 13:22 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ಯಲಹಂಕದಲ್ಲಿ ಆಯೋಜಿಸಿರುವ ‘ಏರೋ ಇಂಡಿಯಾ 2021’ ವೈಮಾನಿಕ ಪ್ರದರ್ಶನದ ಉದ್ಘಾಟನಾ ಸಮಾರಂಭದ ವೇದಕೆಯಲ್ಲಿ ಕನ್ನಡ ಕಣ್ಮರೆಯಾಗಿದ್ದು, ತ್ರಿಭಾಷಾ ಸೂತ್ರ ಮರೆಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ‘ಏರೋ ಇಂಡಿಯಾ 2021 ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಕನ್ನಡ ಕಣ್ಮರೆಯಾಗಿದೆ. ತ್ರಿಭಾಷಾ ಸೂತ್ರ ಮರೆಯಲಾಗಿದೆ. ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ಫಲಕ ಮಾತ್ರ ವೇದಿಕೆಯಲ್ಲಿ ರಾರಾಜಿಸುತ್ತಿದೆ. ಈ ಮೂಲಕ ಕನ್ನಡಕ್ಕೆ ಕನ್ನಡ ನೆಲದಲ್ಲೇ ಅಪಚಾರ ಮಾಡಲಾಗಿದೆ. ಇದನ್ನು ಖಂಡಿಸುತ್ತೇನೆ’ ಎಂದಿದ್ದಾರೆ.

‘ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಭದ್ರಾವತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣಿಸಲಾಗಿತ್ತು. ಈ ಕುರಿತ ಆಕ್ಷೇಪಗಳಿಗೆ ಉತ್ತರಿಸಿದ್ದ ಕೇಂದ್ರ, ಕನ್ನಡ ಕಡ್ಡಾಯವಲ್ಲ ಎಂದಿತ್ತು. ಇದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕಹಿ ನೆನಪು ಮರೆಯುವ ಮೊದಲೇ ಬೆಂಗಳೂರಿನಲ್ಲಿ ಕನ್ನಡಕ್ಕೆ ಅಪಚಾರ ಮಾಡಲಾಗಿದೆ. ಇದು ಅತ್ಯಂತ ನೋವಿನ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ರಕ್ಷಣಾ‌‌‌ ಸಚಿವ ರಾಜನಾಥ ಸಿಂಗ್ ಅವರು ಯಲಹಂಕದ‌ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ ಆಯೋಜಿಸಿರುವ ಏರೋ ಇಂಡಿಯಾ ಕಾರ್ಯಕ್ರಮ‌ ಉದ್ಘಾಟಿಸಿದ್ದರು. ಇದೇ ಸಂದರ್ಭದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೂ ಪಾಲ್ಗೊಂಡು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದರು. ರಾಜ್ಯದ ಹಲವು ನಾಯಕರೂ ಅಲ್ಲಿದ್ದರು. ಇವರು ಯಾರಿಗೂ ಕನ್ನಡಕ್ಕಾದ ಅಪಮಾನ ಕಾಣಲಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT