ಕೆ.ಆರ್.ಪೇಟೆ: ‘ಮುಸ್ಲಿಮರು ಕೆತ್ತನೆ ಮಾಡಿದ ಮೂರ್ತಿಗಳಿಗೆ ಪೂಜೆ ಬೇಡ ಎಂದು ಈಗ ಹೇಳುತ್ತಿದ್ದೀರಿ. ಪ್ರತಿಷ್ಠಾಪನೆ ಸಂದರ್ಭದಲ್ಲೇ ನೀವು ಪ್ರತಿಭಟನೆ ಮಾಡಿ ಪೂಜೆ ನಿಲ್ಲಿಸಬೇಕಿತ್ತಲ್ಲವೇ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಗುರುವಾರ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಒಂದು ಧರ್ಮದವರು ಇನ್ನೊಂದು ಧರ್ಮದವರನ್ನು ಕೊಂದು ಬದುಕಲು ಸಾಧ್ಯವಿಲ್ಲ. ಇಲ್ಲಿ ಎಲ್ಲಾ ಧರ್ಮಗಳೂ ಉಳಿಯಬೇಕು’ ಎಂದರು.
‘ಮುಸ್ಲಿಮರು ಕೆತ್ತಿದ ದೇವರ ಮೂರ್ತಿಗಳನ್ನು ಸಾವಿರಾರು ಹಳ್ಳಿಗಳ ದೇವಾಲಯಗಳಲ್ಲಿ ಸಂಪ್ರದಾಯದಂತೆ ಪೂಜಿಸಲಾಗುತ್ತಿದೆ. ಆದರೆ, ಈಗ ಪೂಜೆ ಬೇಡ ಎನ್ನುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಲಾಗುತ್ತಿದೆ’ ಎಂದು ಆರೋಪಿಸಿದರು.