ಬೆಂಗಳೂರು: ಸಫಾಯಿ ಕರ್ಮಚಾರಿಗಳಿಂದ ಮಲಗುಂಡಿ ಸ್ವಚ್ಛಗೊಳಿಸುವ ಪದ್ಧತಿ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುತ್ತಿರುವ ಸಂಬಂಧ ವಿವರವಾದ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಎಐಸಿಟಿಯು ಮತ್ತು ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಮಧ್ಯಂತರ ಆದೇಶ ನೀಡಿದೆ.
ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ ರಾಜ್ಯದಲ್ಲಿ 53.15 ಲಕ್ಷ ಶೌಚಾಲಯಗಳಿವೆ. ಸ್ಥಳೀಯ ಪ್ರಾಧಿಕಾರಗಳು ಮತ್ತು ಸರ್ಕಾರ ಕಾನೂನಿನ ನಿಬಂಧನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
‘ಈ ಕಾಯ್ದೆ ಉಲ್ಲಂಘಿಸುವುದು ಜಾಮೀನು ರಹಿತ ಅಪರಾಧ. ಉಲ್ಲಂಘನೆ ಪ್ರಕರಣಗಳು ಎಷ್ಟು, ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಾಗಿದೆ ಎಂಬುದರ ವಿವರ ಇಲ್ಲ’ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.
‘ಎಫ್ಐಆರ್ ದಾಖಲಾಗಿರುವ ಸಂಖ್ಯೆ ಎಷ್ಟು, ಪ್ರಕರಣಗಳ ಸ್ಥಿತಿಗತಿ, ಶೌಚಾಲಯಗಳು ಸಂಖ್ಯೆ ಬಗ್ಗೆ ಅಂಕಿ–ಅಂಶ ಸಹಿತ ವಿವರ ಸಲ್ಲಿಸಬೇಕು. ಸುಪ್ರೀಂ ಕೋರ್ಟ್ ಆದೇಶಗಳನ್ನು ಪಾಲಿಸಿರುವ ಬಗ್ಗೆಯೂ ಅನುಸರಣಾ ವರದಿ ಸಲ್ಲಿಸುವಂತೆ ಪೀಠ ತಿಳಿಸಿತು.
‘2018ರ ಫೆಬ್ರುವರಿ 23ರಂದು ರಾಜ್ಯ ಸರ್ಕಾರದ ಅಂದಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಪಾಲನೆಯಾಗಿರುವ ಬಗ್ಗೆಯೂ ಅನುಸರಣಾ ವರದಿಯನ್ನು ದಾಖಲೆಗಳ ಸಹಿತ ಸಲ್ಲಿಸಬೇಕು’ ಎಂದು ಆದೇಶಿಸಿತು.