ಹಿರಿಯೂರು: ನಗರದ ಚಿಟುಗು ಮಲ್ಲೇಶ್ವರ ಮಹಾಸಂಸ್ಥಾನದ ಗುರುಗಳಾದ ಜ್ಞಾನಭಾಸ್ಕರ ಸ್ವಾಮೀಜಿ (75) ಗುರುವಾರ ಬೆಳಿಗ್ಗೆ ಚಿಟುಗು ಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿನ ನಿವಾಸದಲ್ಲಿ ಅಸಹಜ ರೀತಿಯಲ್ಲಿ ಮೃತಪಟ್ಟಿದ್ದಾರೆ.
ಬೆಳಿಗ್ಗೆ ಸ್ನಾನಗೃಹದಲ್ಲಿ ಅವರ ಮೃತದೇಹ ಕಂಡುಬಂದಿದೆ. ಸ್ನಾನಕ್ಕೆ ನೀರು ಕಾಯಿಸಿಕೊಳ್ಳುವಾಗ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರಬಹುದೇ ಅಥವಾ ಸಾವಿಗೆ ಬೇರೆ ಕಾರಣ ಇರಬಹುದೇಎಂಬ ಶಂಕೆ ಭಕ್ತರಲ್ಲಿದೆ. ನಗರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವಕರ್ಮ ಸಮಾಜದ ಒಕ್ಕೂಟದಲ್ಲಿನ 63 ಗುರುಗಳ ಪೈಕಿ ಈ ಇವರು ಒಬ್ಬರು. ಮಿಕ್ಕೆಲ್ಲ ಸ್ವಾಮೀಜಿಗಳಿಗೆ ಸಾವಿನ ಮಾಹಿತಿ ನೀಡಲಾಗಿದ್ದು, ಅವರು ಬಂದ ನಂತರ ಅಂತ್ಯಸಂಸ್ಕಾರದ ಬಗ್ಗೆ ನಿರ್ಧರಿಸಲಾಗುವುದು ಎಂದು ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ನಾರಾಯಣಾಚಾರ್ ತಿಳಿಸಿದ್ದಾರೆ.
30 ವರ್ಷಗಳ ಹಿಂದೆ ಜ್ಞಾನಭಾಸ್ಕರ ಸ್ವಾಮೀಜಿ ಸಂಸಾರ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ್ದರು. ಅವರಿಗೆ ಪೂರ್ವಾಶ್ರಮದ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.