ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಯಾದೆಗೇಡು ಹತ್ಯೆ: ತಂದೆ, ಸಹೋದರ ಬಂಧನ

Last Updated 16 ಅಕ್ಟೋಬರ್ 2020, 21:47 IST
ಅಕ್ಷರ ಗಾತ್ರ

ರಾಮನಗರ: ಪರಿಶಿಷ್ಟ ಜಾತಿಯ ಹುಡುಗನನ್ನು ಪ್ರೀತಿಸಿದ ಕಾರಣಕ್ಕೆ ಮಗಳನ್ನೇ ಹತ್ಯೆ ಮಾಡಿದ್ದ ತಂದೆ ಮತ್ತು ಯುವತಿಯ ದೊಡ್ಡಪ್ಪನ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಮಾಗಡಿ ತಾಲ್ಲೂಕಿನ ಕುದೂರು ಹೋಬಳಿಯ ಬೆಟ್ಟದಹಳ್ಳಿ ನಿವಾಸಿ ಕೃಷ್ಣಪ್ಪ (48) ಹಾಗೂ ಅವರ ಸಹೋದರನ ಮಗ ಚೇತನ್‌ (21) ಬಂಧಿತರು. ಕೊಲೆಗೆ ಸಹಕರಿಸಿದ ಮತ್ತೊಬ್ಬ ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕನನ್ನೂ (ಬಾಲಾಪರಾಧಿ) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ತಿಂಗಳ 9ರಂದು ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ಹೇಮಲತಾ (19) ಕಾಣೆಯಾಗಿದ್ದಾಳೆ ಎಂದು ಆಕೆಯ ತಂದೆ ಕೃಷ್ಣಪ್ಪ ಕುದೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದಾದ ಮರುದಿನವೇ ಅವರ ಸಹೋದರನ ತೋಟದಲ್ಲಿ ಯುವತಿಯ ಶವ ಪತ್ತೆಯಾಗಿತ್ತು.

ವ್ಯವಸ್ಥಿತ ಕೃತ್ಯ: ಒಕ್ಕಲಿಗ ಸಮುದಾಯಕ್ಕೆ ಸೇರಿದ ಹೇಮಲತಾ ಅದೇ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಯುವಕನನ್ನು ಪ್ರೀತಿಸುತ್ತಿದ್ದರು. ಈ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಹಿಂದೆಯೂ ರಾಜೀ ಸಂಧಾನ ನಡೆದಿತ್ತು. "ಮಗಳ ಪ್ರೇಮದ ವಿಷಯದಿಂದ ಸಿಟ್ಟಿಗೆದ್ದ ಕೃಷ್ಣಪ್ಪ ಆಕೆಯನ್ನು ಕೊಲ್ಲುವ ನಿರ್ಧಾರಕ್ಕೆ ಬಂದಿದ್ದರು. ಅದರಂತೆ ಇದೇ ತಿಂಗಳ 8ರಂದೇ ಸಂಬಂಧಿಕರ ಜೊತೆಗೂಡಿ ಆಕೆಯನ್ನು ಹತ್ಯೆ ಮಾಡಿ ಶವವನ್ನು ಸಮೀಪದ ಜಮೀನಿನಲ್ಲಿ ಹೂತಿದ್ದರು. ಮರು ದಿನ ಠಾಣೆಗೆ ಬಂದು ಮಗಳು ಕಾಣೆ ಆಗಿದ್ದಾಗಿ ತಾವೇ ದೂರನ್ನೂ ನೀಡಿದ್ದರು’ ಎಂದು ಕೇಂದ್ರ ವಲಯ ಐಜಿಪಿ ಸೀಮಂತ್‌ಕುಮಾರ್‌ ಸಿಂಗ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

"ಪ್ರಕರಣವನ್ನು ಬೇರೆಡೆಗೆ ತಿರುಗಿಸುವ ಸಲುವಾಗಿ ಆರೋಪಿ ಕೃಷ್ಣಪ್ಪ ಯುವತಿಯ ಪ್ರಿಯಕರನ ಮೇಲೆ ಅನುಮಾನ ವ್ಯಕ್ತಪಡಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಯುವತಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ ಎಂದೂ ಸುದ್ದಿ ಹಬ್ಬಿಸಲಾಗಿತ್ತು. ಅದರಂತೆ ನಾವು ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ವಿಚಾರಣೆ ನಡೆಸಿದೆವು. ನಂತರದಲ್ಲಿ ಯುವತಿಯ ಪೋಷಕರ ನಡೆ ಹಲವು ಅನುಮಾನಗಳಿಗೆ ಕಾರಣವಾಯಿತು. ಯುವತಿಯ ಅಂತ್ಯಕ್ರಿಯೆ ಸಂದರ್ಭವೂ ಅವರಲ್ಲಿ ದುಃಖ ಇರಲಿಲ್ಲ. ಹೀಗಾಗಿ ವಿಚಾರಣೆ ನಡೆಸಿದಾಗ ಪೋಷಕರೇ ಕೊಲೆ ಮಾಡಿರುವ ಸಂಗತಿ ಬೆಳಕಿಗೆ ಬಂತು’ ಎಂದು ರಾಮನಗರ ಎಸ್ಪಿ ಗಿರೀಶ್‌ ವಿವರಿಸಿದರು. ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆ ಇದ್ದು, ಅವರನ್ನೂ ಬಂಧಿಸುವುದಾಗಿ ತಿಳಿಸಿದರು.

ಅಪಪ್ರಚಾರ ಮಾಡಿದವರ ಮೇಲೂ ಪ್ರಕರಣ

"ಹೇಮಲತಾರನ್ನು ಅತ್ಯಾಚಾರ ಮಾಡಿ, ಬರ್ಬರವಾಗಿ ಹತ್ಯೆ ಮಾಡಲಾಗಿದೆ’ ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದ್ದವರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. "ಕೆಲವರು ತಾವೇ ತನಿಖೆ ನಡೆಸಿದವರಂತೆ ಪ್ರಕರಣದ ಕುರಿತು ಇಲ್ಲಸಲ್ಲದ ಹೇಳಿಕೆಗಳನ್ನು ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಇದರಿಂದ ಪ್ರಕರಣ ಇನ್ನಷ್ಟು ಜಟಿಲವಾಗಿತ್ತು. ಯಾರ್ಯಾರು ಈ ರೀತಿ ಪೋಸ್ಟ್‌ ಹಾಕಿದ್ದಾರೋ ಅಂತಹವರನ್ನೂ ಬಂಧಿಸಲಾಗುವುದು’ ಎಂದು ಐಜಿಪಿ ಸೀಮಂತ್‌ಕುಮಾರ್‌ ಸಿಂಗ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT