ಬೆಂಗಳೂರು: ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಮಂಗಳವಾರ ಕೆ. ಅಬ್ದುಲ್ ಜಬ್ಬಾರ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಷಣಕ್ಕೆ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಬೆಂಬಲಿಗರು ಅಡ್ಡಿಪಡಿಸಿರುವುದು ವರದಿಯಾಗಿದೆ.
ಇದರಿಂದಾಗಿ ಮುಜುಗರಕ್ಕೊಳಗಾದ ಸಿದ್ದರಾಮಯ್ಯ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ವೇದಿಕೆಯಿಂದ ಕೆಳಗೆಇಳಿದಿರುವ ಘಟನೆ ನಡೆದಿದೆ.
ಈ ಎಲ್ಲ ನಾಟಕೀಯ ಬೆಳವಣಿಗೆಯಿಂದಾಗಿ ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಮತ್ತೆ ಅಪಸ್ವರ ಭುಗಿಲೆದ್ದಿದೆ.
ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರನ್ನು ಕಡೆಗಣಿಸಲಾಗಿದೆ ಎಂದು ಅವರ ಬೆಂಬಲಿಗರು ಘೋಷಣೆಯನ್ನು ಕೂಗಿದರು. ಕೆಲವರು ಜಮೀರ್ ಫೋಟೊ ಹಿಡಿದು ಘೋಷಣೆಗಳನ್ನು ಕೂಗಿದ್ದರಲ್ಲದೆ ಸಿದ್ದು ಭಾಷಣವನ್ನು ಅಡ್ಡಿಗೊಳಿಸಿದರು.
ಈ ಸಂದರ್ಭದಲ್ಲಿ ಅಶಿಸ್ತಿನ ವರ್ತನೆ ಬಗ್ಗೆ ಗರಂ ಆದ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್, ಕಾಂಗ್ರೆಸ್ ದ್ರೋಹಿಗಳು ಘೋಷಣೆಗಳನ್ನು ಕೂಗುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ವ್ಯಕ್ತಿ ಪೂಜೆಯನ್ನು ಬಿಟ್ಟು ಪಕ್ಷ ಪೂಜೆ ಮಾಡುವಂತೆ ಸಲಹೆ ಮಾಡಿದರು.