ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾದ ಆರೋಪದಡಿ ಲಿಂಗಸುಗೂರು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಹಾಗೂ ಕಲಬುರಗಿ ಬೆರಳಚ್ಚು ವಿಭಾಗದ ಸಿಪಿಐ ಆನಂದ ಮೈತ್ರಿ ಅವರನ್ನು, ಗುರುವಾರ ಸಿಐಡಿ ಅಧಿಕಾರಿಗಳು ವೈದ್ಯಕೀಯ ತಪಾಸಣೆಗೆ ಕರೆದೊಯ್ದರು.
ಇಬ್ಬರನ್ನೂ ವೈದ್ಯಕೀಯ ತಪಾಸಣೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಂಜೆಗೆ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಸಿಐಡಿ ಮೂಲಗಳು ಮಾಹಿತಿ ನೀಡಿವೆ.
ಈ ಇಬ್ಬರೂ ಅಧಿಕಾರಿಗಳನ್ನು ಬುಧವಾರ ನಿರಂತರ ವಿಚಾರಣೆ ನಡೆಸಿದ್ದ ಸಿಐಡಿ ಅಧಿಕಾರಿಗಳು, ಗುರುವಾರ ಬೆಳಿಗ್ಗೆ ಮತ್ತೆ ಕರೆಸಿದ್ದರು. ಮಧ್ಯಾಹ್ನ 3.30ರವದೆಗೂ ತೀವ್ರ ವಿಚಾರಣೆ ನಡೆಸಿದರು.
ಬ್ಲೂಟೂತ್ ಬಳಸಿ ವಾಮಮಾರ್ಗದ ಮೂಲಕ ಅಭ್ಯರ್ಥಿಗಳನ್ನು ಪಾಸ್ ಮಾಡಿಸಲು, ಆರೋಪಿ ರುದ್ರಗೌಡ ಪಾಟೀಲ ಬಳಿ 'ಡೀಲ್' ಮಾಡಿದ ಆರೋಪ ಇವರ ಮೇಲಿದೆ.