ಕೆ.ಆರ್.ಪುರ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕನ್ನಡದ ಬಾವುಟ ಸುಟ್ಟು ಹಾಕಿರುವ ಶಿವಸೇನಾ ಮತ್ತು ಎಂಇಎಸ್ ನಿಷೇಧಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಇಲ್ಲಿನ ಬಿಬಿಎಂಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
'ಶಿವಸೇನಾ ಹಾಗೂ ಎಂಇಎಸ್ ಪುಡಾರಿಗಳು ಕನ್ನಡದ ಬಾವುಟ ಸುಟ್ಟರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ರಾಜ್ಯದ ಕನ್ನಡಿಗರಿಗೆ ಮಾಡಿದ ಅವಮಾನವಾಗಿದೆ’ ಎಂದು ರಾಜ್ಯ ಉಪಾಧ್ಯಕ್ಷ ಶಿವುರಾಜ್ ಗೌಡ್ರು ಟೀಕಿಸಿದರು.
ಕೆ.ಆರ್.ಪುರ ಕರವೇ ಉಪಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ‘ಮರಾಠಿ ಪುಂಡರಿಗೆ ಮಸಿ ಬಳಿದ ಕನ್ನಡಪರ ಹೋರಾಟಗಾರ ಸಂಪತ್ ಕುಮಾರ್ ದೇಸಾಯಿ ಅವರನ್ನು ಈ ಕೂಡಲೇ ಬಿಡುಗಡೆಗೊಳಿಸಬೇಕು’ ಎಂದು ಆಗ್ರಹಿಸಿದರು. ಕೇಶವಮೂರ್ತಿ, ಲೋಕೇಶ್, ದೀಪಕ್, ಸೋಮು, ಡಿ.ಟಿ.ಶ್ರೀನಿವಾಸ್, ಗಂಧರ್ವ ರಮೇಶ್, ದೇವೇಂದ್ರ ಇದ್ದರು.