ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ವಿ.ವಿ: ಚಕ್ರತೀರ್ಥ ಲೇಖನ ಸೇರ್ಪಡೆ

ಪಠ್ಯ ಸಮಿತಿ ಗಮನಕ್ಕೆ ತಾರದೇ ಸೇರ್ಪಡೆ l ಸಮಿತಿ ಸಭೆಯಲ್ಲಿ ವಾಗ್ವಾದ, ಎಳೆದಾಟ
Last Updated 17 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ರೋಹಿತ್ ಚಕ್ರತೀರ್ಥ ಬರೆದ ಲೇಖನವೊಂದನ್ನು ಪಠ್ಯಪುಸ್ತಕ ಸಮಿತಿಯಲ್ಲಿ ಚರ್ಚೆಯನ್ನೇ ನಡೆಸದೇ ಕುವೆಂಪು ವಿಶ್ವವಿದ್ಯಾಲಯದ ಬಿಸಿಎ ಪದವಿಯ ಪಠ್ಯಕ್ಕೆ ಸೇರಿಸಿರುವುದು ಈಗ ತಕರಾರಿಗೆ ಕಾರಣವಾಗಿದೆ.

ವಿಶ್ವವಿದ್ಯಾಲಯದ ವ್ಯಾಪ್ತಿಯ ಪದವಿ ಕಾಲೇಜುಗಳ ಪಠ್ಯಗಳನ್ನು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯಕ್ರಮದಂತೆ ಪರಿಷ್ಕರಣೆ ಮಾಡಲಾಗುತ್ತಿದೆ. ಕನ್ನಡ ಭಾಷಾ ವಿಷಯದ ಪಠ್ಯದ ತಂತ್ರಜ್ಞಾನ ವಿಭಾಗದಲ್ಲಿನ ‘ಕೃತಕ ಬುದ್ದಿವಂತಿಕೆ; ಭವಿಷ್ಯ ತಂತ್ರಜ್ಞಾನದ ಹೆಬ್ಬಾಗಿಲು’ ಲೇಖನದ ಲೇಖಕರ ಹೆಸರು ರೋಹಿತ್‌ ಬೆಂಗಳೂರು ಎಂದು ಇದೆ.

ಪಠ್ಯಪುಸ್ತಕ ಸಮಿತಿಯಲ್ಲಿ ಈ ಬಗ್ಗೆ ಚರ್ಚೆ ನಡೆದಾಗ, ‘ಇದು ರೋಹಿತ್ ಚಕ್ರತೀರ್ಥ ಅವರ ಲೇಖನ. ಅವರ ಪೂರ್ಣ ಹೆಸರನ್ನು ಮರೆಮಾಚಿ ಮೋಸ ಮಾಡಲಾಗಿದೆ’ ಎಂದು ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಸಭೆಯಲ್ಲಿ ಮಾತಿಗೆ ಮಾತು ಬೆಳೆದು, ಸದಸ್ಯರು ಪರಸ್ಪರ ಎಳೆದಾಡಿಕೊಂಡರು ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಈ ಲೇಖನ ರೋಹಿತ್‌ ಚಕ್ರತೀರ್ಥ ಸಂಪಾದಕತ್ವದ ‘ಸೂತ್ರ’ ಪತ್ರಿಕೆಯ 2021ರ ಆಗಸ್ಟ್‌ ಸಂಚಿಕೆಯಲ್ಲಿ ಪ್ರಕಟವಾಗಿದೆ. ಪತ್ರಿಕೆಯಲ್ಲಿ ಲೇಖಕರ ಹೆಸರು ‘ತತ್ವಬೋಧ’ ಎಂದಿದೆ. ಆದರೆ, ಕುವೆಂಪು ವಿಶ್ವವಿದ್ಯಾಲಯದ ಪಠ್ಯಪುಸ್ತಕದಲ್ಲಿ ರೋಹಿತ್ ಹೆಸರು ನಮೂದಿಸಲಾಗಿದೆ. ಇದು ಚಕ್ರತೀರ್ಥರ ಲೇಖನ. ಅರ್ಧ ಹೆಸರು ಬಳಸಿಕೊಂಡು ಸದಸ್ಯರ ಗಮನಕ್ಕೆ ತಾರದೇ ಪಠ್ಯಪುಸ್ತಕದಲ್ಲಿ ತುರುಕಲಾಗಿದೆ’ ಎನ್ನುವುದು ಸಮಿತಿಯ ಸದಸ್ಯರ
ಆರೋಪ.

‘ರೋಹಿತ್‌ ಚಕ್ರತೀರ್ಥ ಅವರ ‘ಸೂತ್ರ’ ಪತ್ರಿಕೆಯಿಂದ ಲೇಖನ ತೆಗೆದುಕೊಳ್ಳಲಾಗಿದೆ. ಅಲ್ಲಿ ಲೇಖಕರ ಹೆಸರು ‘ತತ್ವಬೋಧ’ ಎಂದಿದೆ. ಲೇಖನ ಬಳಕೆಗೆ ಪತ್ರಿಕೆಯ ಸಂಪಾದಕೀಯ ಬಳಗ ಅನುಮತಿ ನೀಡುವಾಗ ‘ರೋಹಿತ್ ಬೆಂಗಳೂರು’ ಎಂದು ಹಾಕುವಂತೆ ಸೂಚಿಸಿತ್ತು. ಹಾಗಾಗಿ, ಅವರು ಸೂಚಿಸಿದ ಹೆಸರು ಬಳಸಲಾಗಿದೆ’ ಎನ್ನುತ್ತಾರೆ ಕನ್ನಡ ಭಾಷಾ ಪಠ್ಯಪುಸ್ತಕ ಸಮಿತಿಯ ಸಂಪಾದಕ ಎಚ್‌.ಎಸ್‌.ರಘುನಾಥ.

ಮೀನಾ ಕಂದಸ್ವಾಮಿ ಕವಿತೆಗೆ ಕೊಕ್‌: ಪದವಿ ಕಾಲೇಜುಗಳ ಇಂಗ್ಲಿಷ್‌ ಪಠ್ಯದಲ್ಲಿ ಅಳವಡಿಸಿದ್ದ ದಲಿತ ಕವಯತ್ರಿ, ತಮಿಳುನಾಡು ಅಣ್ಣಾಮಲೈ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಮೀನಾ ಕಂದಸ್ವಾಮಿ ಅವರ ಕವಿತೆಗೆ ಸಮಿತಿಯ ಕೆಲ ಸದಸ್ಯರು ವಿರೋಧ ವ್ಯಕ್ತಪಡಿದ್ದು, ಕವಿತೆಯನ್ನು ಇಂಗ್ಲಿಷ್‌ ಭಾಷಾ ಪಠ್ಯದಿಂದ ಕೈಬಿಡಲಾಗಿದೆ.

ಗೋಳ್ವಲ್ಕರ್ ಲೇಖನಕ್ಕೂ ಆಕ್ಷೇಪ

ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿನ ಆಧುನಿಕ ಭಾರತದ ರಾಜಕೀಯ ಚಿಂತನೆ ಪುಸ್ತಕದಲ್ಲಿ ಅಳವಡಿಸಿರುವ ಎಂ.ಎಸ್. ಗೋಳ್ವಲ್ಕರ್ ಮತ್ತು ಆರ್‌ಎಸ್‌ಎಸ್‌ ಕುರಿತ ಲೇಖನ, ‘ಸೆಕ್ಯುಲರ್ ವಾದದ ಚರ್ಚೆ’ ವಿಭಾಗದಲ್ಲಿನ ಆರ್‌ಎಸ್‌ಎಸ್‌ ಚಿಂತಕ ಪ್ರೊ.ಬಾಲಗಂಗಾಧರ್ ಅವರ ಲೇಖನಕ್ಕೂ ವಿರೋಧ ವ್ಯಕ್ತವಾಗಿದೆ.

ಸ್ನಾತಕೋತ್ತರ ಅಧ್ಯಯನ ಮಂಡಳಿಯಲ್ಲಿದ್ದ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮುಜಾಫರ್ ಅಸ್ಸಾದಿ ಅವರು ಬರಹಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಗೋಳ್ವಲ್ಕರ್, ಆರ್‌ಎಸ್‌ಎಸ್‌ ಕುರಿತ ಬರಹ ಹೊಸದಾಗಿ ಸೇರಿಸಿಲ್ಲ. ಹಲವು ವರ್ಷಗಳಿಂದ ಬೋಧಿಸಲಾಗುತ್ತಿದೆ. ವಿವಾದ ಅನಗತ್ಯ. ವಿರೋಧ ವ್ಯಕ್ತಪಡಿಸಿದವರಿಗೆ ಸೂಕ್ತ ವಿವರಣೆ ನೀಡಲಾಗಿದೆ’ ಎನ್ನುತ್ತಾರೆ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎ.ಷಣ್ಮುಖ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT