ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಮ್‌ ಜತೆ ಆಧಾರ್‌ ಸಂಖ್ಯೆ ಜೋಡಣೆ: ಆರಗ ಜ್ಞಾನೇಂದ್ರ

Last Updated 20 ಫೆಬ್ರುವರಿ 2023, 22:31 IST
ಅಕ್ಷರ ಗಾತ್ರ

ಬೆಂಗಳೂರು: ‘ಸೈಬರ್‌ ಅಪರಾಧಗಳನ್ನು ತಡೆಯಲು ಸಿಮ್‌ ಕಾರ್ಡ್‌ಗಳ ಜತೆ ಆಧಾರ್‌ ಕಾರ್ಡ್‌ ಜೋಡಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರಿಕೆ ಸಲ್ಲಿಸ ಲಾಗಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಸೋಮವಾರ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಬುದ್ಧಿವಂತರೇ ತಂತ್ರಜ್ಞಾನ ದುರುಪಯೋಗಪಡಿಸಿಕೊಂಡು ದರೋಡೆ ಮಾಡುತ್ತಿದ್ದಾರೆ. ಸೈಬರ್‌ ವಂಚನೆಗೆ ಒಳಗಾದವರು 112 ಸಂಖ್ಯೆಗೆ ಘಟನೆ ನಡೆದ ಎರಡು ಗಂಟೆ ಒಳಗೆ ದೂರವಾಣಿ ಕರೆ ಮಾಡಿದರೆ ಬ್ಯಾಂಕ್‌ ಖಾತೆಯನ್ನು ಸ್ಥಗಿತಗೊಳಿಸಿ ಹಣ ವರ್ಗಾವಣೆಯಾಗದಂತೆ ಯತ್ನಿಸಲಾಗುವುದು’ ಎಂದು ವಿವರಿಸಿದರು.

‘ಒಬ್ಬ ವ್ಯಕ್ತಿಗೆ ಗರಿಷ್ಠ ಒಂಬತ್ತು ಸಿಮ್‌ ಕಾರ್ಡ್‌ಗಳನ್ನು ನೀಡಬಹುದಾಗಿದೆ. ಕೆಲವರು ಈ ಸಿಮ್‌ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ವಿದೇಶ ಗಳಿಂದಲೂ ಕರೆ ಮಾಡಿ ವಂಚಿಸು ತ್ತಿದ್ದಾರೆ. ಇಂತಹ ವಂಚನೆಗಳ ಬಗ್ಗೆ ಎಚ್ಚರವಹಿಸುವಂತೆ ಸಾರ್ವಜನಿಕರಲ್ಲಿ ಪೊಲೀಸ್‌ ಇಲಾಖೆ ಜಾಗೃತಿ ಮೂಡಿ ಸುತ್ತಿದೆ. ಗ್ರಾಹಕರು ಸಿಮ್‌ ಕಾರ್ಡ್‌ ಅನ್ನು ಇತರರಿಗೆ ನೀಡಬಾರದು’ ಎಂದರು.

‘ರಾಜ್ಯದಲ್ಲಿ ಸೈಬರ್‌ ವಿಭಾಗವನ್ನು ಬಲಪಡಿಸಲಾಗಿದ್ದು, ಈಗಾಗಲೇ 45 ಠಾಣೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಸೈಬರ್‌ ಠಾಣೆಗಳಿವೆ. ಬೇರೆ ರಾಜ್ಯದವರು ಸಹ ಇಲ್ಲಿನ ವ್ಯವಸ್ಥೆ ಬಗ್ಗೆ ಅಧ್ಯಯನ ಮಾಡಿದ್ದಾರೆ’ ಎಂದು ತಿಳಿಸಿದರು.



ಉತ್ತರ ನೀಡದ ಸರ್ಕಾರ: ರಮೇಶ್‌ ಧರಣಿ

ಬೆಂಗಳೂರು: ತಾವು ಕೇಳಿದ ಪ್ರಶ್ನೆಗೆ ಸರ್ಕಾರ ಉತ್ತರ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ವಿಧಾನಪರಿಷತ್‌ನಲ್ಲಿ ಸೋಮವಾರ ಕಾಂಗ್ರೆಸ್‌ನ ಪಿ.ಆರ್‌. ರಮೇಶ್‌ ಅವರು ಕೆಲಕಾಲ ಸಭಾಪತಿ ಪೀಠದ ಮುಂದೆ ಧರಣಿ ನಡೆಸಿದರು.

‘ಉತ್ತರ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಉದ್ದೇಶಪೂರ್ವಕವಾಗಿ ಉತ್ತರ ನೀಡುವುದನ್ನು ಮುಂದೂಡಲಾಗುತ್ತಿದೆ ಅಥವಾ ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ವರ್ಗಾಯಿಸಿ ವಿಳಂಬ ಮಾಡಲಾಗುತ್ತಿದೆ’ ಎಂದು ರಮೇಶ್‌ ದೂರಿದರು.

ಪೀಠದಲ್ಲಿದ್ದ ಉಪಸಭಾಪತಿ ಎಂ.ಕೆ ಪ್ರಾಣೇಶ್ ಅವರು ಮನವೊಲಿಸಿ ಸರ್ಕಾರದಿಂದ ಉತ್ತರ ಕೊಡಿಸುವುದಾಗಿ ಭರವಸೆ ನೀಡಿದ ಬಳಿಕ ತಮ್ಮ ಆಸನಕ್ಕೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT