ಬೆಂಗಳೂರು: ಮೇಕೆದಾಟು ಬಳಿ ಸಮಾನಾಂತರ ಜಲಾಶಯ ನಿರ್ಮಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸಲ್ಲಿಸಿರುವ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಕೇಂದ್ರ ಸರ್ಕಾರದ ಉಸ್ತುವಾರಿಯಲ್ಲಿರುವ ‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ’ (ಸಿಡಬ್ಲ್ಯೂಎಂಎ) ಒಪ್ಪಿಗೆ ನೀಡದಿರುವುದರಿಂದ ಆರು ವರ್ಷ ಕಳೆದರೂ ಯೋಜನೆ ಕಡತದಲ್ಲೇ ಉಳಿದಿದೆ.
ಪ್ರಸ್ತಾವಿತ ಯೋಜನೆಗೆ ಸಂಬಂಧಿಸಿದ ಕಾರ್ಯಸೂಚಿ 2019ರ ಏಪ್ರಿಲ್ 25ರಂದು ನಡೆದ ಪ್ರಾಧಿಕಾರದ ಮೂರನೇ ಸಭೆಯಲ್ಲಿ ಮಂಡನೆಯಾಗಿತ್ತು. ಆ ಬಳಿಕ, ಜೂನ್ 25ರಂದು, 2020ರ ಫೆ. 25, ಜೂನ್ 10 ಮತ್ತು ಜುಲೈ 30ರಂದು ನಡೆದ ಐದೂ ಸಭೆಗಳ ಕಾರ್ಯಸೂಚಿಯಲ್ಲಿಯೂ ಪ್ರಸ್ತಾವ ಇತ್ತು.ತಮಿಳುನಾಡು ವಿಧಾನಸಭೆಗೆ 2021 ಏಪ್ರಿಲ್ – ಮೇ ತಿಂಗಳಲ್ಲಿ ಚುನಾವಣೆ ನಡೆದಿತ್ತು. ಅಲ್ಲಿನ ಚುನಾವಣೆಯಲ್ಲಿ ಬೀಳಬಹುದಾದ ಮತಗಳ ಮೇಲೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ದೃಷ್ಟಿ ನೆಟ್ಟಿತ್ತು. ಈ ರಾಜಕೀಯ ಕಾರಣವೂ ಪ್ರಾಧಿಕಾರದ ಸಭೆಯ ಮೇಲೆ ಪರಿಣಾಮ ಬೀರಿತು ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರಾಧಿಕಾರವುಡಿಪಿಆರ್ಗೆ ಒಪ್ಪಿಗೆ ನೀಡಿದ ಬಳಿಕ ಅದನ್ನು ಕೇಂದ್ರ ಜಲ ಆಯೋಗದ (ಸಿಡಬ್ಲ್ಯೂಸಿ) ಅನುಮೋದನೆಗೆ ಕಳುಹಿಸಿಕೊಡಲಾಗುತ್ತದೆ. ಆದರೆ, ತಮಿಳುನಾಡು ಸರ್ಕಾರ ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿತು. ಜತೆಗೆ ರಾಜಕೀಯವೂ ಸೇರಿದ್ದರಿಂದಾಗಿ ಕರ್ನಾಟಕದ ಮಹತ್ವದ ಯೋಜನೆಗೆ ಹಿನ್ನಡೆಯಾಗುತ್ತಲೇ ಬಂದಿತು’ ಎಂದು ಅವರು ಹೇಳಿದರು.
ಕರ್ನಾಟಕವು ನಿಯಮ ಉಲ್ಲಂಘಿಸಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂಬ ಪತ್ರಿಕಾ ವರದಿಯೊಂದನ್ನು ಆಧರಿಸಿ 2021ರ ಮೇ 21ರಂದು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಎನ್ಜಿಟಿಯ ದಕ್ಷಿಣದ (ಚೆನ್ನೈ) ಪೀಠ, ಮೇಕೆದಾಟು ಸ್ಥಳ ಪರಿಶೀಲನೆಗಾಗಿ ಸಮಿತಿಯೊಂದನ್ನು ರಚಿಸಿ ಆದೇಶ ನೀಡಿತ್ತು. ಅದರ ವಿರುದ್ಧ ಜೂನ್ 9ರಂದು ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಮೇಕೆದಾಟು ಯೋಜನೆಯನ್ನು ಪ್ರಶ್ನಿಸಿ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವಾಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುವ ಅಧಿಕಾರ ಎನ್ಜಿಟಿಯ ಚೆನ್ನೈ ಪೀಠಕ್ಕೆ ಇಲ್ಲ’ ಎಂದು 2021ರ ಜೂನ್ 17ರಂದು ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಆಗಸ್ಟ್ 11ರಂದು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ.
ಯೋಜನೆ ಪೂರ್ವಾಪರ
ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2017 ಜೂನ್ 7ರಂದು ಬೆಂಗಳೂರಿನಲ್ಲಿರುವ ಕೇಂದ್ರದ ಜಲ ಆಯೋಗ (ಸಿಡಬ್ಲ್ಯೂಸಿ) ಪ್ರಾದೇಶಿಕ ಕಚೇರಿಗೆ ₹ 5,912 ಕೋಟಿ ಅಂದಾಜು ವೆಚ್ಚದ ಡಿಪಿಆರ್ ಅನ್ನು ಸಲ್ಲಿಸಿತ್ತು. ತಮಿಳುನಾಡು ಕೆಲವು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದರಿಂದ, ಅದಕ್ಕೆ ಸೂಕ್ತ ಸ್ಪಷ್ಟನೆಗಳನ್ನೂ ಸೇರಿಸಿ, ಮರು ಪ್ರಸ್ತಾವನೆಯನ್ನು ದೆಹಲಿಯಲ್ಲಿರುವ ಸಿಡಬ್ಲ್ಯೂಸಿ ಕೇಂದ್ರ ಕಚೇರಿಗೆ ಸಲ್ಲಿಸುವಂತೆ ಜುಲೈ 7ರಂದು ಪ್ರಾದೇಶಿಕ ಕಚೇರಿ ಸೂಚಿಸಿತ್ತು.
‘ಯೋಜನೆಯ ಮೂಲಕ ವಾರ್ಷಿಕ 16.1 ಟಿಎಂಸಿ ಅಡಿ ನೀರನ್ನು ಬೆಂಗಳೂರು ಹಾಗೂ ಸುತ್ತಮುತ್ತ ಕುಡಿಯುವ ಉದ್ದೇಶಕ್ಕೆ ಪೂರೈಸಲಾಗುತ್ತದೆ ಎಂದು ಡಿಪಿಆರ್ನಲ್ಲಿ ತಿಳಿಸಲಾಗಿದೆ. ಆದರೆ, ಕುಡಿಯುವ ನೀರು ಪಡೆಯಲಿರುವ ಪ್ರದೇಶವು ಕಾವೇರಿ ಕಣಿವೆ ವ್ಯಾಪ್ತಿಗೆ ಒಳಪಡಲಿದೆಯೇ, ಇಷ್ಟು ಪ್ರಮಾಣದ ನೀರನ್ನು ರಾಜ್ಯಕ್ಕೆ ಹಂಚಿಕೆಯಾಗಿರುವ ಪಾಲಿನಲ್ಲೇ ಬಳಸಲಾಗುತ್ತದೆಯೇ. ಯೋಜನೆಯಿಂದ ಕಾವೇರಿ ಜಲವಿವಾದ ನ್ಯಾಯಮಂಡಳಿ ನೀಡಿರುವ ಐತೀರ್ಪಿನ ಉಲ್ಲಂಘನೆ ಆಗಲಿದೆಯೇ’ ಎಂಬ ಬಗ್ಗೆ ವಿವರಣೆ ನೀಡುವಂತೆಯೂ ಪ್ರಾದೇಶಿಕ ಕಚೇರಿ ಸೂಚಿಸಿತ್ತು.
‘ಯೋಜನೆಯಿಂದ ತಮಿಳುನಾಡಿಗೆ ಕಾವೇರಿ ನೀರು ಸರಾಗವಾಗಿ ಹರಿದುಹೋಗುವಲ್ಲಿ ಯಾವುದೇ ರೀತಿಯ ಅಡ್ಡಿ ಉಂಟಾಗದು’ ಎಂದು ಈ ಮೊದಲೇ ಸ್ಪಷ್ಟಪಡಿಸಿದ್ದ ಕರ್ನಾಟಕ, ಸಮಾನಾಂತರ ಜಲಾಶಯದ ಉದ್ದೇಶವನ್ನು ಸ್ಪಷ್ಟಪಡಿಸಿತ್ತು.
ಮೇಕೆದಾಟು ಯೋಜನೆಯನ್ನು ಪ್ರಶ್ನಿಸಿ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವಾಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುವ ಅಧಿಕಾರ ಎನ್ಜಿಟಿಯ ಚೆನ್ನೈ ಪೀಠಕ್ಕೆ ಇಲ್ಲ’ ಎಂದು 2021ರ ಜೂನ್ 17ರಂದು ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಆಗಸ್ಟ್ 11ರಂದು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ.
ಯೋಜನೆ ಏನು ಎತ್ತ?
* ಯೋಜನೆಯ ಹೆಸರು: ಮೇಕೆದಾಟು ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ (ಸಮಾನಾಂತರ ಜಲಾಶಯ)
* ಯೋಜನೆ ಉದ್ದೇಶ: ಕುಡಿಯುವ ನೀರು, 400 ಮೆಗಾವಾಟ್ ವಿದ್ಯುತ್ ಉತ್ಪಾದನೆ
* ಭೂಮಿ ಮುಳುಗಡೆ: ಅರಣ್ಯ– 4,716 ಹೆಕ್ಟೇರ್, ಕಂದಾಯ ಭೂಮಿ– 280 ಹೆಕ್ಟೇರ್
* ಆರಂಭಿಕ ಅಂದಾಜು ವೆಚ್ಚ– ₹ 5,912 ಕೋಟಿ
* ಪರಿಷ್ಕೃತ ಅಂದಾಜು ವೆಚ್ಚ– ₹ 9,000 ಕೋಟಿ
* ಪೂರ್ಣ ಜಲಾಶಯದ ಮಟ್ಟ– 440 ಮೀ
* ಡೆಡ್ ಸ್ಟೋರೇಜ್ ಮಟ್ಟ– 370.48 ಮೀ
* ಜಲಾಶಯದ ಉದ್ದ– 660 ಮೀಟರ್
* ಜಲಾಶಯದ ಎತ್ತರ– 99 ಮೀಟರ್
* ನೀರು ಶೇಖರಣೆ ಸಾಮರ್ಥ್ಯ: 67.14 ಟಿಎಂಸಿ ಅಡಿ
ಕೇಂದ್ರಕ್ಕೆ ರಾಜ್ಯದ ಪತ್ರ ಸರಣಿ
* 2015 ಏಪ್ರಿಲ್ 30– ಮೇಕೆದಾಟು ಯೋಜನೆ ಬಗ್ಗೆ ಪ್ರಧಾನಿಗೆ ಸಿದ್ದರಾಮಯ್ಯ ನಿವೇದನಾ ಪತ್ರ
* 2019ರ ನ. 11– ಕೇಂದ್ರ ಜಲಶಕ್ತಿ ಸಚಿವಗೆ ಬಿ.ಎಸ್.ಯಡಿಯೂರಪ್ಪ ಪತ್ರ
* 2019ರ ನ. 19– ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ಯು.ಪಿ. ಸಿಂಗ್ಗೆ ಮುಖ್ಯ ಕಾರ್ಯದರ್ಶಿಯಾಗಿದ್ದ ಟಿ.ಎಂ. ವಿಜಯಭಾಸ್ಕರ್ ಪತ್ರ
*2019 ಜ. 18– ₹ 9,000 ಕೋಟಿ ಮೊತ್ತದ ಪರಿಷ್ಕೃತ ಡಿಪಿಆರ್ ಅನ್ನು ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯ ಸರ್ಕಾರ ಸಲ್ಲಿಸಿತ್ತು.
* 2021 ಜುಲೈ 3– ಪ್ರಧಾನಿ, ಕೇಂದ್ರ ಜಲಶಕ್ತಿ, ಪರಿಸರ ಸಚಿವ ಮತ್ತು ತಮಿಳುನಾಡು ಮುಖ್ಯಮಂತ್ರಿಗೆ ಸ್ಟಾಲಿನ್ಗೆ ಬಿ.ಎಸ್. ಯಡಿಯೂರಪ್ಪ ಪತ್ರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.