ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ದರ ಏರಿಕೆ, ಸಿಎಂ ಜೊತೆ ಚರ್ಚಿಸಿ ನಿರ್ಧಾರ: ಬಾಲಚಂದ್ರ ಜಾರಕಿಹೊಳಿ

ಪ್ರತಿ ಲೀಟರ್‌ಗೆ ₹ 3 ಹೆಚ್ಚಿಸುವಂತೆ ಹಾಲು ಒಕ್ಕೂಟಗಳಿಂದ ಮನವಿ– ಬಾಲಚಂದ್ರ ಜಾರಕಿಹೊಳಿ
Last Updated 15 ಜನವರಿ 2022, 19:24 IST
ಅಕ್ಷರ ಗಾತ್ರ

ಬೆಂಗಳೂರು: ‘ನಂದಿನಿ’ ಹಾಲಿನ ದರ ಏರಿಕೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು’ ಎಂದು ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಕೆಎಂಎಫ್ 2020-21ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಹಾಲಿನ ದರ ಪ್ರತಿ ಲೀಟರ್‌ಗೆ ₹ 3 ಹೆಚ್ಚಿಸಲು ಎಲ್ಲ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಕೋರಿದ್ದಾರೆ‘ ಎಂದು ತಿಳಿಸಿದರು.

‘ಹೆಚ್ಚಿಸಿದರೆ ಲೀಟರ್ ಹಾಲಿಗೆ ಈಗಿರುವ ₹ 37ರಿಂದ ₹ 40 ದರ ಆಗಲಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ದರ ಅತಿ ಕಡಿಮೆ ಇದೆ. ದರ ಹೆಚ್ಚಿಸಿದರೆ ಆ ಹಣವನ್ನು (₹ 3) ರೈತರಿಗೆ ನೀಡಲಾಗುವುದು’ ಎಂದೂ ಹೇಳಿದರು.

‘ಪ್ರಸಕ್ತ ವರ್ಷ (2021-22) ಕೆಎಂಎಫ್‌ನ 5 ಪಶು ಆಹಾರ ಘಟಕಗಳಿಂದ 7.28 ಲಕ್ಷ ಟನ್ ಪಶು ಆಹಾರ ಉತ್ಪಾದಿಸಿ ಮಾರಾಟ ಮಾಡುವ ಗುರಿ ಇದೆ. ಅಂದಾಜು ₹1,017 ಕೋಟಿ ವಹಿವಾಟು ನಿರೀಕ್ಷೆ ಇದೆ’ ಎಂದರು.

‘ಬೆಳಗಾವಿಯಲ್ಲಿ ನಂದಿನಿ ಮೆಗಾ ಫುಡ್ ಪಾರ್ಕ್‌ ಆರಂಭಿಸುವ ಕಾರ್ಯ ಪ್ರಗತಿಯಲ್ಲಿದೆ. ಹೊರರಾಜ್ಯಗ ಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಸಮಗ್ರ ಮಾರುಕಟ್ಟೆ ಅಭಿವೃದ್ಧಿ ಯೋಜನೆ– 2022-2026 ರೂಪಿಸಲಾಗಿದೆ’ ಎಂದರು.

‘ಹಾಸನ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿತ್ಯ 5 ಲಕ್ಷ ಪೆಟ್ ಬಾಟಲ್ ಉತ್ಪಾದಿಸುವ ಪೆಟ್ ಬಾಟಲ್ ಘಟಕ ಅಳವಡಿಸಿದೆ. ಈ ಘಟಕ ಸುಮಾರು 15 ಹೊಸ ಉತ್ಪನ್ನಗಳನ್ನು ಉತ್ಪಾದಿಸಲಿದೆ’ ಎಂದೂ ತಿಳಿಸಿದರು. ರಾಜ್ಯದ ಎಲ್ಲ 14 ಹಾಲು ಒಕ್ಕೂಟಗಳ ಅಧ್ಯಕ್ಷರು, ಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT