ಬೆಂಗಳೂರು: ಕಪ್ಪು ಶಿಲೀಂದ್ರ ಸೋಂಕಿತರಿಗೆ ಚಿಕಿತ್ಸೆ ನೀಡಲು ರಾಜ್ಯದಲ್ಲಿ ಲಭ್ಯ ಇರುವ ಹಾಸಿಗೆಗಳ ಸಂಖ್ಯೆಗೆ ಸಂಬಂಧಿಸಿದಂತೆ ಅಂಕಿ–ಅಂಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಸದ್ಯ ರಾಜ್ಯದಲ್ಲಿ 2,282 ಕಪ್ಪು ಶಿಲೀಂದ್ರ ಪ್ರರಕಣಗಳು ವರದಿಯಾಗಿವೆ. 1,947 ರೋಗಿಗಳು ಚಿಕಿತ್ಸೆಯಲ್ಲಿದ್ದು, 157 ಜನ ಮೃತಪಟ್ಟಿದ್ದಾರೆ. 102 ಮಂದಿ ಗುಣಮುಖರಾಗಿದ್ದಾರೆ ಎಂದು ಸರ್ಕಾರ ವಿವರಿಸಿತು.
‘ಐಸಿಎಂಆರ್ ಹೊರಡಿಸಿರುವ ಹೊಸ ಮಾರ್ಗಸೂಚಿಗಳ ಪ್ರಕಾರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಅಗತ್ಯ ಔಷಧಗಳನ್ನ ಕೇಂದ್ರ ಸರ್ಕಾರ ಪೂರೈಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಶೇಷ ವಿಭಾಗೀಯ ಪೀಠ ನಿರ್ದೇಶನ ನೀಡಿತು.
‘22,050 ಡೋಸ್ ಚುಚ್ಚುಮದ್ದನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಹಂಚಿಕೆ ಮಾಡಿದೆ. ಅದರಲ್ಲಿ 19,950 ಚುಚ್ಚುಮದ್ದನ್ನು ಪಡೆಯಲಾಗಿದೆ. ಪ್ರತಿ ರೋಗಿಗೆ 30 ಡೋಸ್ ಚುಚ್ಚುಮದ್ದು ಅಗತ್ಯವಿದೆ’ ಎಂದು ಸರ್ಕಾರ ವಿವರಿಸಿತು.
ಕೋವಿಡ್ ಕೇಂದ್ರ ಮುಚ್ಚಬಾರದು: ಕೋವಿಡ್ ಮೂರನೇ ಅಲೆಯ ಸಂಭವ ಇರುವ ಕಾರಣ ಬಿಬಿಎಂಪಿ ಕೋವಿಡ್ ಕೇಂದ್ರಗಳನ್ನು ಮುಚ್ಚಬಾರದು ಎಂದು ಪೀಠ ಸೂಚನೆ ನೀಡಿತು.
‘ಮೊದಲನೇ ಅಲೆಯ ಬಳಿಕ ಕೆಲ ಕೋವಿಡ್ ಕೇಂದ್ರಗಳನ್ನು ಮುಚ್ಚಿ ಎರಡನೇ ಅಲೆಯಲ್ಲಿ ಮತ್ತೆ ತೆರೆಯಬೇಕಾಯಿತು. ಈ ಬಾರಿ ಹಾಗೆ ಮಾಡದೆ ಕೋವಿಡ್ ಕೇಂದ್ರಗಳನ್ನು ಕಾಯ್ದಿರಿಸಿಕೊಳ್ಳಬೇಕು’ ಎಂದು ತಿಳಿಸಿತು.