ಬೆಂಗಳೂರು: ‘ಗೋಹತ್ಯೆ ನಿಷೇಧಕ್ಕೆ ಸಾಬ್ರಿಂದ ವಿರೋಧ ಇಲ್ಲ. ಈರ–ಪೀರ ಎನ್ನುವ ಸಂಸ್ಕೃತಿ ನಮ್ಮದು. ಇದಕ್ಕೆ ಧರ್ಮದ ಬಣ್ಣ ಹಚ್ಚುವುದು ಬೇಡ. 12 ನೇ ಶತಮಾನದಿಂದಲೂ ಶರಣರು ಸೂಫಿ ಸಂತರು ಒಟ್ಟಿಗೆ ಬೆಳೆದು ಬಂದ ನಾಡಿದು’ ಎಂದು ಕಾಂಗ್ರೆಸ್ನ ಸಿ.ಎಂ.ಇಬ್ರಾಹಿಂ ಹೇಳಿದರು.
ವಿಧಾನಪರಿಷತ್ತಿನಲ್ಲಿ ಗೋಹತ್ಯೆ ನಿಷೇಧದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಮಸೂದೆಗೆ ನಮ್ಮ ವಿರೋಧ ಇಲ್ಲ. ಆದರೆ, ಅದಕ್ಕೆ ಮುನ್ನ ರೈತರು, ಸರ್ಕಾರ ಕುಳಿತು ಚರ್ಚೆ ಮಾಡಬೇಕು. ಆದ್ದರಿಂದ ಮಸೂದೆಯ ಪರಾಮರ್ಶೆಗೆ ಜಂಟಿ ಸದನ ಸಮಿತಿ ರಚಿಸಬೇಕು’ ಎಂದು ಒತ್ತಾಯಿಸಿದರು.
‘ಗೋವುಗಳ ರಕ್ಷಣೆಗೆ ಸರ್ಕಾರ ಏನು ವ್ಯವಸ್ಥೆ ಮಾಡಿಕೊಂಡಿದೆ. ಸರ್ಕಾರ ಗೋಶಾಲೆ ಗಳನ್ನು ಸ್ಥಾಪಿಸಿದೆಯೇ? ನಿಮಗೆ ಸಾಬ್ರು ಗೋಮಾಂಸ ತಿನ್ನುತ್ತಾರೆ ಎಂಬ ಚಿಂತೆ. ನಾವು ತಿನ್ನಲ್ಲ. ಆದರೆ, ಕೆಲವು ವಾಸ್ತವಾಂಶಗಳಿಗೆ ನಿಮ್ಮ ಬಳಿ ಉತ್ತರ ಇದೆಯೇ? ನಾಡ ಹಸವನ್ನು ಗೋವು ಎನ್ನುತ್ತೀರಿ, ಜರ್ಸಿ ಹಸುಗಳನ್ನು ಮುದಿಯಾದ ಮೇಲೆ ರಸ್ತೆಗೆ ಬಿಡಲಾಗುತ್ತದೆ. ಜರ್ಸಿ ಹಸು ಗೋಮಾತೆ ಅಲ್ಲವೇ. ಅದು ಅವ್ವ ಅಲ್ಲವಾ’ ಎಂದು ಇಬ್ರಾಹಿಂ ಬಿಜೆಪಿ ಸದಸ್ಯರನ್ನು ಕೆಣಕಿದರು.
‘ಈ ಮಸೂದೆ ಜಾರಿಗೆ ತಂದ ತಕ್ಷಣ ಜನ ಓಟ್ ಹಾಕುತ್ತಾರೆ ಎಂಬ ಭ್ರಮೆ ಬೇಡ. ಎಲ್ಲರಿಗೂ ಪುಕ್ಕಟೆ ಅಕ್ಕಿ ಕೊಟ್ಟವರ ಕತೆ ಏನಾಯಿತು ನೋಡಿದ್ದೀರಿ. ಮುಂದೆ ಏನಾಗುತ್ತದೆ ಎಂದು ಗೊತ್ತಿಲ್ಲ. ಈಗ ಮಸೂದೆಯನ್ನು ಹಿಂದಕ್ಕೆ ಪಡೆಯಿರಿ. ನಮ್ಮನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚೆ ನಡೆಸಿ. ದೇವರು ನಿಮಗೆ ಬುದ್ಧಿ ಕೊಡಲಿ’ ಎಂದು ಇಬ್ರಾಹಿಂ ಹೇಳಿದರು.