ಬೆಂಗಳೂರು: ‘ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಮಯ ನಿಗದಿಯಾಗಿದ್ದು, ನಾಳೆ (ಬುಧವಾರ) ಸಂಜೆ 4 ಗಂಟೆಗೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಸುದ್ದಿಗಾರರ ಜೊತೆ ಮಂಗಳವಾರ ಬೆಳಿಗ್ಗೆ ಮಾತನಾಡಿದ ಅವರು, ‘ನೂತನ ಸಚಿವರ ಪಟ್ಟಿ ಕೂಡಾ ನಾಳೆಯೇ ಬಿಡುಗಡೆ ಆಗಲಿದೆ. ಸಂಜೆ 4 ಗಂಟೆಗೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯಡಿಯೂರಪ್ಪ, ‘ಇಂದು (ಮಂಗಳವಾರ) ಸಂಜೆ ವೇಳೆಗೆ ಸಚಿವರಾಗುವವರಿಗೆ ನಾನೇ ಮಾಹಿತಿ ನೀಡುತ್ತೇನೆ. ನಾಳೆ ನೂತನ ಸಚಿವ ಪಟ್ಟಿ ಬಿಡುಗಡೆ ಆಗಲಿದೆ. ಸಂಪುಟ ವಿಸ್ತರಣೆಯೊ, ಪುನರ್ ರಚನೆಯೊ ಎನ್ನುವುದು ನಾಳೆ ಗೊತ್ತಾಗಲಿದೆ’ ಎಂದೂ ಹೇಳಿದರು.