ಬೆಂಗಳೂರು: ಆಡಳಿತದಲ್ಲಿ ಕನ್ನಡ ಜಾರಿ ಮಾಡುವಲ್ಲಿ ನಿರ್ಲಕ್ಷ್ಯ ತೋರಿಸುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಇಲಾಖಾ ಮುಖ್ಯಸ್ಥರಿಗೆಕನ್ನಡ ಅಭಿವೃದ್ಧಿ ಪ್ರಾಧಿಕಾರ ಪತ್ರ ಬರೆದಿದೆ.
‘ಒಟ್ಟು 100 ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸಿ ನೋಟಿಸ್ ಕಳಿಸಲಾಗಿದೆ, ಅದರಲ್ಲಿ ಕೆಲವರು ಸಮಜಾಯಿಷಿ ನೀಡಿದ್ದಾರೆ. ಇನ್ನು ಕೆಲವರು ಕ್ಷಮಾಪಣೆ ಕೇಳಿರುವುದರಿಂದ ಅವರ ವಿರುದ್ಧದ ಪ್ರಕರಣಗಳನ್ನು ಕೈಬಿಡಲಾಗಿದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ‘ಪ್ರಜಾವಾಣಿ’ಗೆ ತಿಳಿಸಿದರು.
ರಾಜ್ಯ ಸರ್ಕಾರದ ಇಲಾಖೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರೇ ಸಕ್ಷಮ ಪ್ರಾಧಿಕಾರ ಆಗಿರುವುದರಿಂದ ಅವರಿಗೆ ಶಿಫಾರಸು ಪತ್ರಗಳನ್ನು ಕಳಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ನೋಟಿಸ್ ಕೊಟ್ಟ ಬಳಿಕ ಉತ್ತರ ಪಡೆಯಲು ಮೂರು ತಿಂಗಳು ಸಮಯ ಕೊಡಬೇಕು. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಅವರಿಗೆ ಕಳೆದ ತಿಂಗಳು ನೋಟಿಸ್ ಕೊಟ್ಟಿದ್ದರಿಂದ ಇನ್ನು ಸಮಯ ಇದೆ. ಅವರಿಂದ ಇನ್ನೂ ಉತ್ತರ ಬಂದಿಲ್ಲ ಎಂದು ಅವರು ತಿಳಿಸಿದರು.
ಮೂರು ತಿಂಗಳ ಬಳಿಕ ಉತ್ತರ ನೀಡದವರ ವಿರುದ್ಧ ಶಿಸ್ತು ಕ್ರಮಕ್ಕೆ ಪತ್ರ ಬರೆಯಬಹುದು. ಆಡಳಿತದಲ್ಲಿ ಕನ್ನಡವನ್ನು ಜಾರಿಗೊಳಿಸುವ ಸಂಬಂಧ ಕಾಲ ಕಾಲಕ್ಕೆ ಈ ಇಲಾಖೆಗಳಿಗೆ ಪತ್ರ ಬರೆದರೂ ಸಾಕಷ್ಟು ಅಧಿಕಾರಿಗಳು ಅದಕ್ಕೆ ಉತ್ತರ ನೀಡದೇ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂದರು.