ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಹೊತ್ತಿರುವ ವ್ಯಕ್ತಿಯೊಬ್ಬರ ಪತ್ನಿಯನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತುಮಕೂರಿನ ವ್ಯಕ್ತಿಯೊಬ್ಬರ ಹೆಸರು ಸಿ.ಡಿ ಪ್ರಕರಣದಲ್ಲಿ ಕೇಳಿಬಂದಿತ್ತು. ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು ಬಳಿಕ ಕೆಲಸ ತೊರೆದಿದ್ದರು. ಹಲವು ರಾಜಕೀಯ ನಾಯಕರ ಜೊತೆಗೂ ಆ ವ್ಯಕ್ತಿ ಸಂಪರ್ಕ ಹೊಂದಿದ್ದರು.ಸಿ.ಡಿ ಬಿಡುಗಡೆಯಲ್ಲಿ ಈ ವ್ಯಕ್ತಿಯೇ ಪ್ರಮುಖ ಪಾತ್ರ ವಹಿಸಿರುವ ಆರೋಪವೂ ಕೇಳಿಬಂದಿತ್ತು.
ಪ್ರಕರಣದ ನಂತರ ಈ ವ್ಯಕ್ತಿ ನಾಪತ್ತೆಯಾಗಿದ್ದರು. ಇತ್ತೀಚೆಗಷ್ಟೇ ವಿಡಿಯೊ ಮೂಲಕ ಪ್ರತಿಕ್ರಿಯಿಸಿ, ಮತ್ತೆ ಕಣ್ಮರೆಯಾಗಿದ್ದರು. ತನಿಖೆ ಚುರುಕುಗೊಳಿಸಿದ್ದ ಎಸ್ಐಟಿ ಅಧಿಕಾರಿಗಳು ವ್ಯಕ್ತಿಯ ಕುಟುಂಬದ ಜಾಡು ಬೆನ್ನತ್ತಿದ್ದರು. ತುಮಕೂರು ಜಿಲ್ಲೆಯಲ್ಲಿರುವ ಆ ವ್ಯಕ್ತಿಯ ಪತ್ನಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದರು.
ಪ್ರಕರಣ ಸಂಬಂಧ ಮಾಹಿತಿ ನೀಡುವ ಸಲುವಾಗಿಬಸವನಗುಡಿ ಮಹಿಳಾ ಠಾಣೆಗೆ ಬರುವಂತೆ ಸೂಚಿಸಿದ್ದರು. ಆದರೆ, ಹಲವು ಕಾರಣಗಳನ್ನು ನೀಡಿ ಮಹಿಳೆ ವಿಚಾರಣೆಗೆ ಎರಡು ಬಾರಿಯೂ ವಿಚಾರಣೆಗೆ ಬಂದಿರಲಿಲ್ಲ.
ಮೂರನೇ ಬಾರಿ ನೀಡಿದ್ದ ನೋಟಿಸ್ಗೂ ಅವರು ಉತ್ತರಿಸಿರಲಿಲ್ಲ. ಹಾಗಾಗಿ, ಎಸ್ಐಟಿ ಅಧಿಕಾರಿಗಳ ತಂಡ ಮಹಿಳೆ ಇರುವ ಸ್ಥಳಕ್ಕೇ ತೆರಳಿ, ಅವರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಅವರನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ಎಸ್ಐಟಿ ಮೂಲಗಳು ತಿಳಿಸಿವೆ.