ಆಟೊರಿಕ್ಷಾದಲ್ಲಿ ಸ್ಪೋಟದ ತನಿಖೆಗೆ ಎನ್ಐಎಗೆ: ನಳಿನ್ ಕುಮಾರ್

ಮಂಗಳೂರು: ನಗರದ ಗರೋಡಿಯಲ್ಲಿ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ತನಿಖೆಯನ್ನು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನಡೆಸಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.
‘ಈ ಕೃತ್ಯದ ಹಿಂದಿರುವ ಮೂಲಭೂತವಾದಿಗಳ ಜಾಡನ್ನು ಪತ್ತೆಹಚ್ಚಲು ಎನ್ಐಎ ತನಿಖೆಯಿಂದ ನೆರವಾಗಲಿದೆ. ಬಾಂಬ್ ಸ್ಫೋಟದ ಹಿಂದೆ ಅಂತರರಾಜ್ಯ ದೇಶದ್ರೋಹಿಗಳ ಕೈವಾಡ ಪತ್ತೆ ಹಚ್ಚಲು ಎನ್ಐಎ ಕಾರ್ಯತತ್ಪರವಾಗಿದೆ. ನಮ್ಮ ಉನ್ನತ ಪೊಲೀಸ್ ಅಧಿಕಾರಿಗಳು ಸಹಕರಿಸುತ್ತಿದ್ದಾರೆ.
ಮಂಗಳೂರಿನಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಭಯೋತ್ಪಾದಕ ಕೃತ್ಯ ನಡೆಸಲು ಪ್ರಯತ್ನಿಸುವವರ ಜನ್ಮ ಜಾಲಾಡಿ ಶಾಶ್ವತವಾಗಿ ಅವರು ನೆನಪಿಡುವ ಕ್ರಮ ಜರುಗಿಸಲಾಗುವುದು.’
'ಭಯೋತ್ಪಾದಕ ಕೃತ್ಯ ಮಾಡುವ ಮೂಲಕ ರಾಜ್ಯಕ್ಕೆ ಕೆಟ್ಟ ಹೆಸರು ತರುವ ಮತಾಂಧರ ಪ್ರಯತ್ನ ಜಾರಿಯಾಗಲು ಬಿಡುವುದಿಲ್ಲ. ದೇಶದ್ರೋಹಿ ಸಂಘಟನೆಗಳನ್ನು ನಿಷೇಧ ಮಾಡಿದ ಬಳಿಕ ವಿಧ್ವಂಸಕ ಕೃತ್ಯಗಳನ್ನು ಮಾಡಿ ಬಾಲ ಬಿಚ್ಚಲು ಕೆಲವರು ಹೊರಟಿದ್ದಾರೆ. ಭಯೋತ್ಪಾದನೆಯ ವಿರುದ್ಧದ ನಮ್ಮ ಸಮರದಲ್ಲಿ ನಾಗರಿಕರ ಸಹಕಾರ ಮುಖ್ಯ. ಕರ್ನಾಟಕದಲ್ಲಿ ನಮ್ಮ ಪೊಲೀಸ್ ಇಲಾಖೆ ಮಂಗಳೂರಿನ ಸ್ಫೋಟದ ಮೂಲ ಪತ್ತೆಹಚ್ಚುವಲ್ಲಿ ನಿರತವಾಗಿದ್ದು, ಕೇಂದ್ರದಿಂದ ಅಗತ್ಯ ನೆರವು ನೀಡಲಾಗಿದೆ’ ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಎನ್ಐಎ ಘಟಕ ಸ್ಥಾಪಿಸಿ: ವೇದವ್ಯಾಸ ಕಾಮತ್
ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್, ‘ಈ ಕೃತ್ಯದ ಬಗ್ಗೆಸಮಗ್ರ ತನಿಖೆ ಆಗಬೇಕು. ರಿಕ್ಷಾದಲ್ಲಿ ಪ್ರಯಾಣಿಸಿದ ವ್ತಕ್ತಿ ಏಕೆ ಕುಕ್ಕರ್ ತಂದಿದ್ದ. ಎಲ್ಲಿ ಏನು ಮಾಡಬೇಕೆಂಬ ಉದ್ದೇಶ ಇತ್ತು ಎಂಬ ಬಗ್ಗೆಯೂ ಕೂಲಂಕಷವಾಗಿ ತನಿಖೆ ನಡೆಸಬೇಕು. ನಗರದಲ್ಲಿ ಯಾವತ್ತೂ ಬಾಂಬ್ ಸ್ಫೋಟ ನಡೆದಿರಲಿಲ್ಲ. ಕರ್ನಾಟಕ ಕೇರಳದ ಗಡಿ ಪ್ರದೇಶವಿದು. ಇಲ್ಲಿ ಘಟನೆ ಆದಾಗ ಕೇರಳಕ್ಕೆ ಪರಾರಿಯಾಗುತ್ತಾರೆ. ಇದನ್ನು ತಪ್ಪಿಸಲು ಎನ್ಐಎ ಘಟಕವನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.