ತಿಪಟೂರು: ತಿಪಟೂರಿನ ‘ಬಯಲುಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘ’ ನೀಡುವ ‘ಸಾಹಿತ್ಯ ಕಲ್ಪತರು’ ರಾಜ್ಯಮಟ್ಟದ ಪ್ರಶಸ್ತಿಗೆ ಕವಯತ್ರಿ, ಅನುವಾದಕಿ, ಪ್ರಕಾಶಕಿ ಪ್ರೊ. ಎಂ.ಆರ್. ಕಮಲ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ₹10 ಸಾವಿರ ನಗದು, ಸ್ಮರಣ ಫಲಕ ಒಳಗೊಂಡಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಬಾನುಪ್ರಶಾಂತ್ ತಿಳಿಸಿದ್ದಾರೆ.
ಸಾಹಿತ್ಯ ಕ್ಷೇತ್ರದ ಜೀವಮಾನದ ಸಾಧನೆಗಾಗಿ ಕಮಲ ಅವರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ. ಇದು ಸಂಘ ನೀಡುತ್ತಿರುವ ಮೂರನೇ ಪ್ರಶಸ್ತಿಯಾಗಿದ್ದು, ಈ ಹಿಂದೆ ಬಾರಿ ಕವಿ ಡುಂಡಿರಾಜ್ ಮತ್ತು ಬಿ.ಆರ್. ಲಕ್ಷ್ಮಣರಾವ್ ಅವರಿಗೆ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ಪ್ರಧಾನ ಸಮಾರಂಭವು ನ. 18 ರಂದು ಸಂಜೆ 6ಕ್ಕೆ ನಗರದ ಸತ್ಯ ಗಣಪತಿ ಆಸ್ಥಾನ ಮಂಟಪದಲ್ಲಿ ಜರುಗಲಿದೆ. ಸಮಾರಂಭದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಬೆಂಗಳೂರು ದೂರದರ್ಶನ ಕೆಂದ್ರದ ಮಾಜಿ ನಿರ್ದೇಶಕ ಜಿ.ಎಂ. ಶಿರಹಟ್ಟಿ ಭಾಗವಹಿಸಲಿದ್ದಾರೆ.