ಬೆಂಗಳೂರು: ‘ಪ್ರೌಢಶಾಲೆ ಮತ್ತು ಪಿಯುಸಿಗೆ ನೇರ ತರಗತಿಗಳು 23ರಿಂದ ಆರಂಭವಾಗಲಿದ್ದು, ಮಕ್ಕಳ ಸುರ ಕ್ಷತೆಗೆ ಸಂಬಂಧಿಸಿ ವಿಸ್ತೃತ ಎಸ್ಒಪಿಯನ್ನು (ಪ್ರಮಾಣಿತ ಕಾರ್ಯಚರಣಾ ವಿಧಾನ) ಶೀಘ್ರವೇ ಬಿಡುಗಡೆ ಮಾಡಲಾಗುವುದು’ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಿಸಿ ಸೋಮವಾರ ಮಾತನಾಡಿದ ಅವರು, ‘ಶಾಲೆ ಆರಂಭಿಸುವ ಕುರಿತ ತಜ್ಞರ ವರದಿ ಬಂದಿದೆ. ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ವಿದ್ಯಾಗಮ ಆರಂಭ ಕುರಿತು ಮಾಸಾಂತ್ಯದೊಳಗೆ ತೀರ್ಮಾನಿಸುತ್ತೇವೆ’ ಎಂದರು.
ದಾಖಲಾತಿ ಹೆಚ್ಚಳಕ್ಕೆ ಕ್ರಮ: ‘ರಾಜ್ಯದಲ್ಲಿ 5,600 ಪದವಿಪೂರ್ವ ಕಾಲೇಜುಗಳಿದ್ದು, 12 ಲಕ್ಷ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಜೊತೆಗೆ, ಈ ವರ್ಷ ಸರ್ಕಾರಿ ಪ್ರೌಢಶಾಲೆಗಳನ್ನು ಉನ್ನತೀಕರಿಸುವ ಕಾರ್ಯವೂ ನಡೆಯುತ್ತಿದೆ.ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೂ ಪ್ರವೇಶ ಸಿಗಲಿದೆ’ ಎಂದರು.
‘ಶೇ 84ರಷ್ಟು ಶಿಕ್ಷಕರು ಈಗಾಗಲೇ ಕೋವಿಡ್ ಲಸಿಕೆ ಪಡೆದಿದ್ದಾರೆ. ಶೇ 19ರಷ್ಟು ಶಿಕ್ಷಕರು ಎರಡೂ ಡೋಸ್ ಪಡೆದಿದ್ದಾರೆ. ಉಳಿದ ಶಿಕ್ಷಕರಿಗೆ ಆ.23ರ ಒಳಗೆ ಲಸಿಕೆ ನೀಡುವ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಚರ್ಚಿಸಿದ್ದೇವೆ’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ತಿಳಿಸಿದರು.