ಬೆಂಗಳೂರು: ‘ಕಳ್ಳರನ್ನು ಕಳ್ಳ ಎಂದು ಕರೆಯದೇ ಸಾಧುಗಳು, ಸಂತರು, ಸಮಾಜ ಸುಧಾರಕರೆಂದು ಕರೆಯಬೇಕೇ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ರಾಹುಲ್ ಗಾಂಧಿ ಅವರ ಸಂಸತ್ ಸ್ಥಾನದ ಅನರ್ಹತೆಯ ಕ್ರಮ ಖಂಡಿಸಿ, ಬೆಂಗಳೂರು ಕೇಂದ್ರ, ದಕ್ಷಿಣ ಹಾಗೂ ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
‘ಭಾರತ್ ಜೋಡೊ ಯಾತ್ರೆಯ ಬಳಿಕ ರಾಹುಲ್ ಗಾಂಧಿ ಅವರ ವರ್ಚಸ್ಸು ವೃದ್ಧಿಯಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಆತಂಕ ಹೆಚ್ಚಿಸಿದೆ. ರಾಜಕೀಯ ದ್ವೇಷದಿಂದ ಅನರ್ಹತೆ ಮಾಡಲಾಗಿದೆ’ ಎಂದು ವಾಗ್ದಾಳಿ ನಡೆಸಿದರು.
‘ಇದು ಹಿಟ್ಲರ್ನ ಜರ್ಮನಿಯೂ ಅಲ್ಲ. ಮುಸೊಲಿನಿಯ ಇಟಲಿಯೂ ಅಲ್ಲ. ನಾವು ಪ್ರಜಾಪ್ರಭುತ್ವ ಒಪ್ಪಿಕೊಂಡು ಬದುಕುತ್ತಿದ್ದೇವೆ. ಅನರ್ಹತೆ ಕ್ರಮವು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಆಘಾತ ತಂದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ದಮನ ಮಾಡಲಾಗುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.
‘ಕೋಲಾರದ ಕೆಜಿಎಫ್ನಲ್ಲಿ ರಾಹುಲ್ ಗಾಂಧಿ ಅವರು ಭಾಷಣ ಮಾಡುವ ವೇಳೆ ನಾನೂ ವೇದಿಕೆಯಲ್ಲಿದ್ದೆ. ಜಾತಿ ನಿಂದನೆ ಅಥವಾ ಮಾನಹಾನಿಕರ ರೀತಿಯಲ್ಲಿ ಮಾತನಾಡಿಲ್ಲ. ದೇಶದ ಜನರ ಹಣವನ್ನು ಕೊಳ್ಳೆ ಹೊಡೆದು ವಿದೇಶಕ್ಕೆ ಹೋದವರ ಹೆಸರು ಪ್ರಸ್ತಾಪಿಸಿದ್ದರು. ಅವರನ್ನು ಕಳ್ಳರು ಎಂದು ಕರೆಯುವ ಸ್ವಾತಂತ್ರ್ಯವೂ ಇಲ್ಲವೇ? ಹಾಗಿದ್ದರೆ ಅವರು ಸಮಾಜ ಸುಧಾರಕರೇ? ಹಿಟ್ಲರ್, ಮುಸೊಲಿನಿ ವಂಶಸ್ಥರಿಂದ ನಾವು ದೇಶ ಭಕ್ತಿಯ ಪಾಠ ಕಲಿಯಬೇಕಿಲ್ಲ’ ಎಂದು ಹೇಳಿದರು.
ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ, ಲಲಿತ್ ಮೋದಿ, ನೀರವ್ ಮೋದಿ ಸೇರಿ ಹಲವರು ಬ್ಯಾಂಕ್ಗಳನ್ನು ಕೊಳ್ಳೆ ಹೊಡೆದು ವಿದೇಶದಲ್ಲಿದ್ದಾರೆ. ಅದು ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ, ನಳಿನ್ಕುಮಾರ್ ಕಟೀಲ್, ನಡ್ಡಾ, ಅಮಿತ್ ಶಾ ಅವರ ಹಣ ಅಲ್ಲ. ಜನರ ದುಡ್ಡು. ಪ್ರಜಾಪ್ರಭುತ್ವದ ತಾಯಿ ಭಾರತವೆಂದು ಕರೆಯಲಾಗುತ್ತಿತ್ತು. ಅದನ್ನೇ ನಾಶ ಪಡಿಸಲಾಗುತ್ತಿದೆ’ ಎಂದು ಆಕ್ರೋಶ ಹೊರಹಾಕಿದರು.
ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, ‘ತನ್ನ ವಿರುದ್ಧ ಮಾತನಾಡುವವರನ್ನು ಬಿಜೆಪಿ ಅನರ್ಹಗೊಳಿಸುತ್ತಿದೆ. ಪ್ರಜಾಪ್ರಭುತ್ವದ ವಿರೋಧಿ ನಡೆಯನ್ನು ಮಾಧ್ಯಮಗಳೂ ಪ್ರಶ್ನಿಸುತ್ತಿಲ್ಲ. ತಪ್ಪು ಮಾಡಿದಾಗ ಟೀಕೆಗಳು ಪ್ರಜಾತಂತ್ರ ವ್ಯವಸ್ಥೆಯ ಭಾಗ. ದುರುದ್ದೇಶದಿಂದ ರಾಹುಲ್ ಅವರ ಬಾಯಿ ಮುಚ್ಚಿಸಲು ಅನರ್ಹತೆ ಕ್ರಮ ಬಳಸಲಾಗಿದೆ’ ಎಂದು ಕಿಡಿಕಾರಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಶಾಸಕರಾದ ಕೆ.ಜೆ.ಜಾರ್ಜ್, ಎನ್.ಎ. ಹ್ಯಾರೀಸ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.