ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಸರ್ಕಾರದ ಸುಳ್ಳುಗಳು: ಸಿದ್ದರಾಮಯ್ಯ ಪಟ್ಟಿ ಬಿಡುಗಡೆ

Last Updated 24 ಜೂನ್ 2022, 13:04 IST
ಅಕ್ಷರ ಗಾತ್ರ

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಲ್ಲಿ ಎಳೆಯ ಮಕ್ಕಳ ಮನಸ್ಸುಗಳಿಗೆಸರ್ಕಾರ ಮತ್ತು ಸರ್ಕಾರದ ಹಿಂದೆ ಗುಪ್ತವಾಗಿ ಕೆಲಸ ಮಾಡುತ್ತಿರುವ ಸಂಘ ಪರಿವಾರ ವಿಷ ಹಾಕಲು ಹೊರಟಿವೆ. ವಿವಾದ ಪ್ರಾರಂಭವಾಗಿ ತಿಂಗಳುಗಳು ಕಳೆಯುತ್ತಿದ್ದರೂ ತಜ್ಞರ ಸಮಿತಿ ಮಾಡಿ ಸಮಸ್ಯೆಗಳೇನು ಎಂದು ಪರಿಶೀಲಿಸುವ ಬದಲಿಗೆ ರೋಹಿತ್ ಚಕ್ರತೀರ್ಥ ಮಾಡಿರುವ ಪ್ರಮಾದಗಳನ್ನು ಸಮರ್ಥಿಸಿಕೊಳ್ಳುವ ಬೇಜವಾಬ್ಧಾರಿತನವನ್ನು ಸರ್ಕಾರ ತೋರಿಸುತ್ತಿದೆಎಂದು ಪತ್ರದ ಮುಖೇನ ಸರ್ಕಾರದ ವಿರುದ್ಧ ಪ್ರಹಾರ ಮಾಡಿದ್ದಾರೆ

ಈ ಕುರಿತು ಸುದೀರ್ಘ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ಸಿದ್ದರಾಮಯ್ಯ,ಬರಗೂರು ಸಮಿತಿಯ ನೇತೃತ್ವದಲ್ಲಿ ಇತಿಹಾಸ ತಜ್ಞರು ಬರೆದಿದ್ದ ಇತಿಹಾಸದ ಪಾಠಗಳಿಗೆ ವೈಜ್ಞಾನಿಕ ತಳಹದಿ ಇರುವುದರಿಂದ ಅವುಗಳನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯ ಅವರು ಪ್ರಕಟಣೆಯಲ್ಲಿ ಹೇಳಿರುವ 33 ವಿಚಾರಗಳು ಇಲ್ಲಿವೆ.

1. ವಿವಾದ ಪ್ರಾರಂಭವಾಗಿ ಇಷ್ಟು ದಿನವಾದ ಮೇಲೆ ನಿನ್ನೆ ಕಂದಾಯ ಸಚಿವ ಆರ್ ಅಶೋಕ್ ಅವರು ತಮ್ಮ ಪಕ್ಕದಲ್ಲಿ ಸಿಸಿ ಪಾಟೀಲ್, ಭೈರತಿ ಬಸವರಾಜು ಮತ್ತು ಶಿವರಾಮ್ ಹೆಬ್ಬಾರ್‌ ಅವರನ್ನು ಕೂರಿಸಿಕೊಂಡು ಪತ್ರಿಕಾಗೋಷ್ಠಿ ಮಾಡಿದ್ದಾರೆ. ಈ ನಾಲ್ಕೂ ಜನರು ಕೂಡ ಶಿಕ್ಷಣ ಇಲಾಖೆಯ ಬಗ್ಗೆ ಮಾಹಿತಿಯೆ ಇಲ್ಲದವರು ಮತ್ತು ಅದರಲ್ಲಿ 3 ಜನ ಶೂದ್ರ ಸಮುದಾಯಗಳಿಗೆ ಸೇರಿದ ಸಚಿವರು. ಹಾಗೊಂದು ವೇಳೆ ಸಮರ್ಪಕ ಮಾಹಿತಿ ಇದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾಧ್ಯಮಗೋಷ್ಠಿ ನಡೆಸಬೇಕಾಗಿತ್ತು. ವಾಸ್ತವವಾಗಿ ಪತ್ರಿಕಾ ಗೋಷ್ಠಿಯನ್ನು ನಡೆಸಿ ಸತ್ಯ ಸಂಗತಿಗಳನ್ನು ವಿವರಿಸಬೇಕಾಗಿದ್ದುದು ಸಂಬಂಧಿತ ಶಿಕ್ಷಣ ಸಚಿವರು. ಕಂದಾಯ ಸಚಿವ ಆರ್ ಅಶೋಕ್ ಅವರು ಕುಳಿತುಕೊಂಡು ಸಂಪೂರ್ಣವಾಗಿ ಈ ವಿಚಾರವನ್ನುರಾಜಕೀಕರಣಗೊಳಿಸಲು ಪ್ರಯತ್ನಿಸಿದ್ದಾರೆ.

2. ಪಠ್ಯ ಪುಸ್ತಕಗಳು ಪಕ್ಷ ಪುಸ್ತಕಗಳಾಗಬಾರದು ಎಂದು ಹಲವಾರು ರಾಷ್ಟ್ರೀಯ, ಅಂತರ ರಾಷ್ಟ್ರೀಯ ಚಿಂತಕರು ಹಾಗೂ ಸಂಸ್ಥೆಗಳು ನಿರಂತರವಾಗಿ ಹೇಳುತ್ತಾ ಬಂದಿವೆ.ಭಾರತದಲ್ಲಿ ಇದುವರೆಗೆ ರಚನೆಯಾಗಿರುವ ಶಿಕ್ಷಣ ಆಯೋಗಗಳು ಮಕ್ಕಳಿಗೆ ಏನನ್ನು ಕಲಿಸಬೇಕು? ಏನನ್ನು ಕಲಿಸಬಾರದು ಎಂದು ಸ್ಪಷ್ಟವಾಗಿ ಹೇಳಿವೆ. ಕಲಿಸಬೇಕಾದ ಸಂಗತಿಗಳಲ್ಲಿ ಮುಖ್ಯವಾಗಿ ಸಂವಿಧಾನದ ಆಶಯಗಳು ಇರಬೇಕು ಮತ್ತು ಕಲಿಸಬಾರದ ಸಂಗತಿಗಳಲ್ಲಿ ಮುಖ್ಯವಾಗಿ ಹಿಂಸೆ, ದ್ವೇಷ, ಅಸಹನೆ, ಅವೈಜ್ಞಾನಿಕತೆ, ಮತಾಂಧತೆ, ಮೌಢ್ಯ, ತಾರತಮ್ಯ ಗುಣಗಳು ಇತ್ಯಾದಿಗಳನ್ನು ಯಾವ ಕಾರಣಕ್ಕೂ ಕಲಿಸಬಾರದೆಂದು ಒತ್ತಿ ಹೇಳಲಾಗಿದೆ.

ಹಾಗಿದ್ದರೆ ಕಲಿಸಬೇಕಾದ ಸಂವಿಧಾನದ ಆಶಯಗಳೇನು?:ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ರೂಪಿಸಬೇಕಾದರೆಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ಪ್ರತಿಪಾದನೆ ಮಾಡುವಂಥ ನಿಲುವುಗಳನ್ನು ಮಕ್ಕಳಿಗೆ ಕಲಿಸಬೇಕು. ಹಿಂದಿನ ಪಠ್ಯದಿಂದ ಸಾಮಾಜಿಕ ನ್ಯಾಯ, ಲಿಂಗ ಸಮಾನತೆ, ಪ್ರಾದೇಶಿಕ ಒಳಗೊಳ್ಳುವಿಕೆಯ ತತ್ವಗಳನ್ನು ಪ್ರತಿಪಾದಿಸುವ ಪಠ್ಯಗಳನ್ನು ಕಿತ್ತು ಹಾಕಿರುವುದು ಅಕ್ಷಮ್ಯ. ಹೊಸದಾಗಿ ಸೇರಿಸಲಾದ ಪಾಠಗಳು ಬಿಜೆಪಿ-ಸಂಘಪರಿವಾರದ ಸಿದ್ಧಾಂತಕ್ಕೆ ಪೂರಕವಾದ ರೀತಿಯಲ್ಲಿ ಇರುವುದು ಸ್ಪಷ್ಟವಾಗಿದೆ.

3. 1986ರ ರಾಷ್ಟ್ರೀಯ ಶಿಕ್ಷಣ ನೀತಿ 1986 ರ ಶಿಕ್ಷಣ ನೀತಿಯ ಪ್ಯಾರಾ 8.5 ರಲ್ಲಿ ಹೀಗೆ ಹೇಳಿದೆ, “ಸಾಂಸ್ಕೃತಿಕವಾಗಿ ನಮ್ಮ ಬಹುತ್ವದ ಸಮಾಜದಲ್ಲಿ, ನಮ್ಮ ಜನರನ್ನು ಏಕತೆ ಮತ್ತು ಸಮಗ್ರತೆಯ ಕಡೆ ಕೊಂಡೊಯ್ಯಲು, ಶಿಕ್ಷಣವು ಸಾರ್ವತ್ರಿಕ ಮತ್ತು ಶಾಶ್ವತ ಮೌಲ್ಯಗಳನ್ನು ಪೋಷಿಸಬೇಕು.ಅಂತಹ ಮೌಲ್ಯಯುತ ಶಿಕ್ಷಣವು ಪ್ರಗತಿ ವಿರೋಧ ಮನೋವೃತ್ತಿ, ಧಾರ್ಮಿಕ ಮತಾಂಧತೆ, ಹಿಂಸೆ, ಮೂಢನಂಬಿಕೆ ಮುಂತಾದವನ್ನು ತೊಡೆದು ಹಾಕಲು ಪ್ರಯತ್ನಿಸಬೇಕು” ಎಂದು ಹೇಳಿದೆ.

4. ಬಿಜೆಪಿ ಸರ್ಕಾರ, ಯಾವುದೋ ಒಂದು ಅರ್ಜಿಗೆ ಸಂಬಂಧಿಸಿದಂತೆ, ನಿರ್ಧಿಷ್ಠ ವಿಷಯವನ್ನು ಪರಿಶೀಲಿಸಿಕೊಡಿ ಎಂದು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಡದ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಯಾವ ಅರ್ಹತೆಯೂ ಇಲ್ಲದ ವ್ಯಕ್ತಿಯಾದ ರೋಹಿತ್ ಚಕ್ರತೀರ್ಥ ಎಂಬುವವರಿಗೆ ದಿನಾಂಕ 8.9.21 ರಂದು ತಿಳಿಸಿದ್ದಾರೆ. ಆದರೆ ಪರಿಶೀಲನೆ ಮಾಡುವುದಕ್ಕೆ ಬದಲಾಗಿ ಸರ್ಕಾರದ ಅಧಿಕೃತ ಆದೇಶವೇ ಇಲ್ಲದೆ ಪರಿಷ್ಕರಣೆ ಮಾಡಿದ್ದಾರೆ. ಈ ಪರಿಷ್ಕರಣೆ ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿರುವುದರಿಂದ ಅಸಾಂವಿಧಾನಿಕವಾಗಿದೆ, ಅಪ್ರಜಾತಾಂತ್ರಿಕ ನಿಲುವಿನಿಂದ ಕೂಡಿದೆ ಎಂದು ಇದರಿಂದ ಸಾಬೀತಾಗಿದೆಯೆಂದು ಹಲವಾರು ತಜ್ಞರುಗಳು ಪ್ರತಿ ಪಾದಿಸುತ್ತಿದ್ದಾರೆ.

5. ಮುಡಂಬಡಿತ್ತಾಯ ಸಮಿತಿ ಸಂವಿಧಾನದ ಆಶಯಗಳಿಗೆ ಶಿಕ್ಷಣ ಆಯೋಗಗಳ ಸಲಹೆಗಳನ್ನು ಗಾಳಿಗೆ ತೂರಿದೆ ಎಂಬ ಕಾರಣದಿಂದಲೆ ನಮ್ಮ ಸರ್ಕಾರ ಬರಗೂರು ರಾಮಚಂದ್ರಪ್ಪನವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಸದರಿ ಸಮಿತಿಯ ಅಡಿಯಲ್ಲಿ 27 ಉಪ ಸಮಿತಿಗಳಿದ್ದವು. ಪ್ರತಿ ಉಪ ಸಮಿತಿಯಲ್ಲಿ 4 ಜನರಿದ್ದರು. ಬರಗೂರು ಸಮಿತಿಯು ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡುವಾಗ ಸುಮಾರು 30 ಸಾವಿರಕ್ಕೂ ಹೆಚ್ಚು ಶಿಕ್ಷಕರು ಮತ್ತು ಶಿಕ್ಷಣ ಸಂಬಂಧಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರೊಂದಿಗೆ ಸಂವಾದ ಮಾಡಲಾಗಿತ್ತೆಂದು ಕೇಳಿದ್ದೇನೆ.

6. ಬರಗೂರು ರಾಮಚಂದ್ರಪ್ಪ ಸಮಿತಿಗೆ ಸಂವಿಧಾನದ ಆಶಯಗಳಿಗೆ ಮತ್ತು ಮೂಲಸ್ಫೂರ್ತಿಯನ್ನು ಹಾಗೂ ಶಿಕ್ಷಣ ಆಯೋಗಗಳನ್ನು ಗಮನದಲ್ಲಿಟ್ಟುಕೊಂಡು, 21 ನೇ ಶತಮಾನಕ್ಕೆ ಬೇಕಾದ ಪಠ್ಯಪುಸ್ತಕವನ್ನು ಪರಿಷ್ಕರಿಸಿಕೊಡಿ ಎಂದು ಕೇಳಿಕೊಂಡಿದ್ದೆವು. ಅದರಂತೆ ಅವರು ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಿ ಕೊಟ್ಟಿದ್ದರು.

7. ನಮ್ಮ ಸರ್ಕಾರದ ಅವಧಿಯಲ್ಲಿ ಪರಿಷ್ಕರಣೆ ಮಾಡಿದ್ದ ಪಠ್ಯ ಪುಸ್ತಕಗಳನ್ನು ವಿರೋಧ ಪಕ್ಷದಲ್ಲಿದ್ದ ಬಿಜೆಪಿಯಾಗಲಿ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಣ ತಜ್ಞರಾಗಲಿ, ಶಿಕ್ಷಕರಾಗಲಿ, ಸಮುದಾಯಗಳಾಗಲಿ, ಮಕ್ಕಳಾಗಲಿ, ಪೋಷಕರಾಗಲಿ ವಿರೋಧ ವ್ಯಕ್ತ ಪಡಿಸಿರಲಿಲ್ಲ. ಯಾಕೆಂದರೆ ಬರಗೂರು ಅಧ್ಯಕ್ಷತೆಯ ಸಮಿತಿಯು ಇಡೀ ನಾಡು, ನುಡಿ, ಪ್ರಾದೇಶಿಕ ವೈವಿಧ್ಯ, ಭಿನ್ನ ಸಂವೇದನೆಗಳನ್ನು ಒಳಗೊಂಡು ಬಹುತ್ವದ ನೆಲೆಯಲ್ಲಿ ಪಠ್ಯ ಪುಸ್ತಕಗಳನ್ನು ರಚಿಸಿತ್ತು ಮತ್ತು ಮುಖ್ಯವಾಗಿ ಸಂವಿಧಾನದ ಆಶಯಗಳನ್ನು ಪ್ರತಿಪಾದಿಸುವ ನಿಲುವುಗಳನ್ನು ಎತ್ತಿ ಹಿಡಿಯಲಾಗಿತ್ತು, ಆದ ಕಾರಣ ಬರಗೂರು ಸಮಿತಿಯ ಪರಿಷ್ಕರಣೆಗೆ ವಿರೋಧ ಬಂದಿರಲಿಲ್ಲ. ಆದರೆ ಈಗ ಕರ್ನಾಟಕದ ಜನರಷ್ಟೆ ಅಲ್ಲ, ತಜ್ಞರುಗಳೂ ವಿರೋಧಿಸಿದ್ದಾರೆ. ಜೊತೆಗೆ ಆಡಳಿತಾರೂಢ ಬಿಜೆಪಿಯ ಎಂ ಎಲ್ ಎ, ಎಂಪಿಗಳೆ ವಿರೋಧಿಸಿದ್ದಾರೆ.

8. ಆದರೆ ಬಿಜೆಪಿ ಸರ್ಕಾರ ಮಾಡಿರುವ ಪಠ್ಯ ಪರಿಷ್ಕರಣೆಯಲ್ಲಿ ಕನ್ನಡ ಭಾಷೆಯ ಪಠ್ಯ ಪುಸ್ತಕದಲ್ಲಿ 21 ಜನ ಶೂದ್ರ ಕವಿ, ಲೇಖಕರ ಬರಹಗಳನ್ನು ಕೈ ಬಿಡಲಾಗಿದೆ [ ಅದರಲ್ಲಿ 6 ಕ್ಕೂ ಹೆಚ್ಚು ಜನ ದಲಿತ ಸಮುದಾಯಗಳ ಬರಹಗಾರರಬರಹಗಳು, 8ಕ್ಕೂ ಹೆಚ್ಚು ಜನ ಲಿಂಗಾಯತ ಸಮುದಾಯಗಳ ಬರಹಗಳನ್ನು ಕೈ ಬಿಡಲಾಗಿದೆ].

9.ಶೂದ್ರ, ದಲಿತ ಬರಹಗಾರರ ಪದ್ಯ, ಗದ್ಯಗಳನ್ನು ಕೈ ಬಿಟ್ಟು 28 ಜನರ ಬರಹಗಳನ್ನು ಸೇರಿಸಿದ್ದಾರೆ. ಸೇರ್ಪಡೆಗೊಂಡ ಶೇ.95 ರಷ್ಟು ಜನ ಲೇಖಕರು ಒಂದೇ ಸಮುದಾಯದವರೆ ಆಗಿದ್ದಾರೆ. ಅವರೆಲ್ಲರೂ ಬ್ರಾಹ್ಮಣರಾಗಿದ್ದಾರೆ. ಆದರಲ್ಲೂ ಸಂವಿಧಾನ ವಿರೋಧಿ ಆರೆಸ್ಸೆಸ್ ಸಿದ್ಧಾಂತ ಬೆಂಬಲಿಸುವ ಬ್ರಾಹ್ಮಣ ಲೇಖಕರ ಗದ್ಯ-ಪದ್ಯಗಳನ್ನು ಕಲಿಸಬಾರದೆನ್ನುವ ವಿಕೃತಿ ನಮ್ಮದಲ್ಲ. ಈ ಹಿಂದೆಯೂ ಹಲವಾರು ಬ್ರಾಹ್ಮಣ ಲೇಖಕರ ಪಠ್ಯಗಳು ಇದ್ದವು. ಆದರೆ ಅವರ ಜೊತೆಯಲ್ಲಿ ಸಮಾಜದ ಎಲ್ಲಾ ಸ್ತರಗಳ ಲೇಖಕ ಲೇಖಕಿಯರಿಗೆ ಅವಕಾಶ ಕಲ್ಪಿಸುವುದು ಸಂವಿಧಾನದ ತತ್ವಗಳಿಗೆ ಅನುಗುಣವಾಗಿದೆ. ಆದರೆ ಈಗ ಇದನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಈಗ ಪಠ್ಯ ಪುಸ್ತಕಗಳಲ್ಲಿ ಶೂದ್ರ, ದಲಿತ, ಅಲ್ಪಸಂಖ್ಯಾತರ ಕುರಿತು ದ್ವೇಷ ಸಾಧಿಸುವ, ಬಹುಪಾಲು ಜನ ಆರ್ ಎಸ್ ಎಸ್ ಗೆ ಸೇರಿದವರ ಪಾಠಗಳನ್ನು ಸೇರಿಸಲಾಗಿದೆ. ಇವರಲ್ಲಿ ಬಹುಪಾಲು ಜನ ಲೇಖಕರೇ ಅಲ್ಲ. ಮನುವಾದಿ ಅಜೆಂಡಾವನ್ನು ಪ್ರಚಾರ ಮಾಡುವ ವಕ್ತಾರರುಗಳಷ್ಟೆ.

10. ಇಡೀ ಸಮಾಜದಲ್ಲಿ ಕೇವಲ ಅತ್ಯಲ್ಪ ಗುಂಪುಗಳನ್ನು ಪ್ರತಿನಿಧಿಸುವ ಇಂತಹ ವ್ಯಕ್ತಿಗಳ ರಾಜಕೀಯ ಪ್ರೇರಿತ ಪಾಠಗಳನ್ನು ಸಮಾಜದ ಶೇಕಡಾ 98ರಷ್ಟು ಸಮುದಾಯಗಳು ಒಪ್ಪಿಕೊಳ್ಳಬೇಕು ಎಂದು ಹೇಳುವುದು ಸರ್ವಾಧಿಕಾರಿ ವರ್ತನೆ. ಇದನ್ನು ನೇರವಾಗಿ ಆರೆಸ್ಸೆಸ್ ವ್ಯಕ್ತಿಗಳಾದ ಸುರೇಶ್ ಕುಮಾರ್, ನಾಗೇಶ್ ಅವರ ಬಾಯಿಂದ ಹೇಳಿಸದೇ ಆರ್. ಅಶೋಕ್, ಸಿ ಟಿ ರವಿ, ಕೋಟಾ ಶ್ರೀನಿವಾಸ ಪೂಜಾರಿ, ನಾರಾಯಣ ಸ್ವಾಮಿ ಮೊದಲಾದ ಹಿಂದುಳಿದ, ಶೂದ್ರ ಮತ್ತು ದಲಿತ ರಾಜಕಾರಣಿಗಳ ಮೂಲಕ ಹೇಳಿಸುವುದು ಆರೆಸ್ಸೆಸ್‍ನ ಪಿತೂರಿ ಪಾಂಡಿತ್ಯ ಎಂಬುದು ಕನ್ನಡಿಗರಿಗೆ ಅರ್ಥವಾಗಿದೆ.

11. ಬರಗೂರು ರಾಮಚಂದ್ರಪ್ಪ ನೇತೃತ್ವದ 27 ತಜ್ಞರ ಸಮಿತಿಗಳು ರಚಿಸಿದ್ದ ಪಠ್ಯಗಳು ಇಡೀ ಸಮಾಜದ ದೃಷ್ಟಿಯಿಂದ ಪೂರ್ಣದೃಷ್ಟಿ ಮತ್ತು ಸಮಗ್ರತೆಯನ್ನು ಬಿಂಬಿಸಿದ್ದವು. ಅವುಗಳಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು -2005ರ ಹಾಗೂ ಭಾರತೀಯ ಸಂವಿಧಾನದ ಮೂಲಭೂತ ಆಶಯಗಳಾದ ಸಾಮಾಜಿಕ ನ್ಯಾಯ, ಲಿಂಗ ಸಮಾನತೆ, ಪ್ರಾದೇಶಿಕ ಒಳಗೊಳ್ಳುವಿಕೆಯ ತತ್ವಗಳನ್ನು ಪಾಲಿಸಲಾಗಿದೆ. ಈಗ ಮಾಡಿರುವ ಪರಿಷ್ಕರಣೆಯಲ್ಲಿ ಈ ಎಲ್ಲಾ ಮಾರ್ಗದರ್ಶಿ ಸೂತ್ರಗಳನ್ನಾಗಲೀ ಸಂವಿಧಾನದ ತತ್ವಗಳನ್ನಾಗಲೀ ಗಾಳಿಗೆ ತೂರಿ ‘ನಾಗಪುರ’- ಆದೇಶಗಳನ್ನಷ್ಟೇ ಪಾಲಿಸಲಾಗಿದೆ. ಎಲ್ಲೆಲ್ಲಿ ಸಾಮಾಜಿಕ ನ್ಯಾಯ-ಸಮಾನತೆ-ಪ್ರಾದೆಶಿಕ ಒಳಗೊಳ್ಳುವಿಕೆಯ ಅಂಶಗಳಿದ್ದವೋ ಅವುಗಳನ್ನೆಲ್ಲಾ ಕಿತ್ತು ಹಾಕಿರುವುದು ಕೇವಲ ಪರಿಷ್ಕರಣಾ ಸಮಿತಿಯ ಮನಸ್ಥಿತಿಯನ್ನು ಮಾತ್ರವಲ್ಲದೇ ಬಿಜೆಪಿ-ಆರೆಸ್ಸೆಸ್‍ಗಳ ಸಮಾಜ ವಿರೋಧಿ ನೀತಿಯನ್ನೂ ಬಿಂಬಿಸುತ್ತದೆ.

12.ರಾಷ್ಟ್ರಕವಿ ಕುವೆಂಪು ಅವರಿಗೆ ಮೊದಲಿಗಿಂತ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಸರ್ಕಾರ ಸಮರ್ಥನೆ ಮಾಡಿಕೊಳ್ಳಲಾಗಿದೆ. ಸೂಕ್ಷ್ಮವಾಗಿ ನೋಡಿದಲ್ಲಿ ಕುವೆಂಪು ಅವರನ್ನು ಮತ್ತೂ ಅವಮಾನಿಸಲಾಗಿದೆ. ಯಾವ ಮತ್ತು ಯಾರ ಪದ್ಯಗಳನ್ನು ತೆಗೆದು ಹಾಕಿ ಅದರ ಬದಲಿಗೆ ಕುವೆಂಪು ಅವರ ಪದ್ಯಗಳನ್ನು ಹಾಕಲಾಗಿದೆ? ಕುವೆಂಪು ಅವರ ಆಶಯಗಳನ್ನು ಸಮರ್ಥವಾಗಿ ತಮ್ಮ ಸಾಹಿತ್ಯದಲ್ಲಿ ಬಿಂಬಿಸುವ ಎಸ್ ಜಿ ಸಿದ್ದರಾಮಯ್ಯ ಮತ್ತು ಬಿ ಟಿ ಲಲಿತಾ ನಾಯಕ್ ಅವರ ಪದ್ಯಗಳನ್ನು ತೆಗೆದು ಒಂದು ತಂತ್ರಗಾರಿಕೆಯಾಗಿ ಕುವೆಂಪು ಪದ್ಯಗಳನ್ನು ಹಾಕಲಾಗಿದೆ. ಈ ಪದ್ಯಗಳ ಕೊನೆಯಲ್ಲಿ ಕುವೆಂಪು ಅವರನ್ನು ಪರಿಚಯಿಸುವಾಗ ‘ರಾಷ್ಟ್ರಕವಿ ಕುವೆಂಪು’ ಎಂದು ಹೇಳುವ ಬದಲಿಗೆ ಅನಗತ್ಯವಾಗಿ ಎರಡನೆಯ ರಾಷ್ಟ್ರಕವಿ ಕುವೆಂಪು (ಮೊದಲನೆಯವರು ಗೋಂವಿದ ಪೈ) ಎಂದು ಬರೆದಿರುವುದು ಎಂತಹ ಮನಸ್ಥಿತಿ? 7 ನೇ ತರಗತಿ ಕನ್ನಡ ಪಠ್ಯದಲ್ಲಿ ಏಕೀಕರಣ ಚಳವಳಿಯ ಪಾಠದಿಂದ ಕುವೆಂಪು ಅವರ ಭಾವಚಿತ್ರವನ್ನು ಕಿತ್ತು ಹಾಕಿ ಅದರ ಬದಲಿಗೆ ಗೋವಿಂದ ಪೈ ಅವರ ಭಾವಚಿತ್ರ ಸೇರಿಸಲಾಗಿದೆ. ಹೀಗೆ ಮಾಡುವುದು ನಾಡಿನ ಇಬ್ಬರು ಧೀಮಂತ ಸಾಹಿತಿಗಳಾದ ರಾಷ್ಟ್ರಕವಿ ಕುವೆಂಪು ಮತ್ತು ರಾಷ್ಟ್ರಕವಿ ಗೋವಿಂದ ಪೈ ಇಬ್ಬರಿಗೂ ಮಾಡಿದ ಅಪಮಾನವಲ್ಲವೇ? ನಾಡಿನ ಏಳಿಗೆಗಾಗಿ ಅಹರ್ನಿಶಿ ದುಡಿ ಚೇತನಗಳನ್ನು ಒಂದು ಸರ್ಕಾರ ಹೀಗೆ ಅಪಮಾನಿಸುವುದು ಸರಿಯೇ?

13. ಈ ಮನುವಾದಿ ಸಿದ್ಧಾಂತದ ಎಲ್ಲ ಶೂದ್ರ- ದಲಿತ, ದುಡಿಯುವ ವರ್ಗಗಳ ವಿರೋಧಿಯಾದ ಬಿಜೆಪಿ ಸರ್ಕಾರ ನಾಲ್ಕು ಜನ ಶೂದ್ರ ಸಮುದಾಯಗಳಿಗೆ ಸೇರಿದ ಸಚಿವರುಗಳ ಬಾಯಲ್ಲಿ ಸುಳ್ಳು ಹೇಳಿಸಿದೆ. ಧೈರ್ಯವಿಲ್ಲದ, ಗೊತ್ತಿಲ್ಲದೆ ಬೆನ್ನಿಗೆ ಇರಿಯುವ ಸ್ವಭಾವದ ಮನುವಾದಿ ದುಷ್ಟರು ನಾಡಪ್ರಭು ಕೆಂಪೇಗೌಡರ ಪಾಠಗಳನ್ನು ಕೈಬಿಟ್ಟಿದೆ ಎಂದು ಹೇಳಿದ್ದಾರೆ. ಸರ್ಕಾರವೊಂದು ಇಷ್ಟು ಹಸಿಯಾದ ಸುಳ್ಳು ಹೇಳಿದರೆ ಅದಕ್ಕೆ ಕ್ಷಮೆ ಇದೆಯೆ?

14. ಬರಗೂರು ಸಮಿತಿಯು ನಾಡಪ್ರಭು ಕೆಂಪೇಗೌಡರ ಕುರಿತಾದ ಪಾಠವನ್ನು 3 ಪುಟಗಳಷ್ಟನ್ನು ಸೇರಿಸಿತ್ತು. ಇದನ್ನು ಬಿಜೆಪಿ ಸರ್ಕಾರವು 1 ಪುಟಕ್ಕೆ ಇಳಿಸಿರುವ ಮಾಹಿತಿ ಸರ್ಕಾರದ ವೆಬ್ ಸೈಟಿನಲ್ಲಿದೆ.

15.ಸಿದ್ಧರಾಮಯ್ಯನವರ ಸರ್ಕಾರ ಮೈಸೂರು ಅರಸರು, ಕೆಂಪೇಗೌಡರ ಪಾಠಗಳನ್ನು ಕೈಬಿಟ್ಟಿತ್ತು ನಿರ್ಲಕ್ಷಿಸಿತ್ತು ಎಂದು ಸುಳ್ಳು ಹೇಳುತ್ತಿದೆ. 7 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಮುಡಂಬಡಿತ್ತಾಯ ಸಮಿತಿಯಲ್ಲಿದ್ದದ್ದಕ್ಕಿಂತ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದೆ. ಬರಗೂರು ಸಮಿತಿಯು ಪರಿಷ್ಕರಿಸಿದ್ದ ಕೆಂಪೇಗೌಡರ ಕುರಿತಾದ ಪಾಠದಲ್ಲಿ ಬಹುಪಾಲನ್ನು ಚಕ್ರತೀರ್ಥ ಸಮಿತಿಯು ಕಿತ್ತು ಹಾಕಿದೆ.

16.ಮೈಸೂರಿನ ಒಡೆಯರ ಕುರಿತು ಸಮಗ್ರ ಮಾಹಿತಿ ಬರಗೂರು ಸಮಿತಿ ರಚನೆಯ ಪಠ್ಯಗಳಲ್ಲಿತ್ತು. ಆದರೆ ‘ಚಕ್ರತೀರ್ಥ ಸಮಿತಿ’ ಮಾಡಿರುವ ಪರಿಷ್ಕರಣೆಯಲ್ಲಿ 7ನೇ ತರಗತಿ ಸಮಾಜ ವಿಜ್ಞಾನ(ಭಾಗ1) ರಲ್ಲಿ ಪುಟ 50-54ರಲ್ಲಿ ಇದ್ದ ಮುಮ್ಮಡಿ ಕೃಷ್ಣರಾಜ ಒಡೆಯರು, ಜಯಚಾಮರಾಜೇಂದ್ರ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರು, ನಾಲ್ವಡಿ ಕೃಷ್ಣರಾಜ ಒಡೆಯರ ಪ್ರಮುಖ ಸಾಧನೆಗಳು, ಸರ್ ಎಂ ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್, ಕಮಿಷನರುಗಳ ಆಡಳಿತ- ಇಷ್ಟೂ ಭಾಗಗಳನ್ನು ಕಿತ್ತು ಹಾಕಿರುವುದು ಏಕೆ? ನಾಡಿನ ಎಲ್ಲಾ ಶೂದ್ರ ಸಮುದಾಯಗಳ ಪಾಲಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಒಂದು ಮಹಾನ್ ಚೇತನ. ಅವರನ್ನು ಕರ್ನಾಟಕದ ಸಾಮಾಜಿಕ ನ್ಯಾಯದ ಹರಿಕಾರ ಎನ್ನವಬಹುದು. ಅಂತವರ ಪಾಠವನ್ನೇ ಕೈಬಿಟ್ಟಿರುವುದರ ಹಿಂದೆ ಶೂದ್ರ ವಿರೋಧಿ ಮನಸ್ಥಿತಿ ಕೆಲಸ ಮಾಡಿದೆ ಎಂಬುದು ಸ್ಪಷ್ಟ. ಬಿಜೆಪಿ ಸರ್ಕಾರದ ಸಚಿವರು ರಾಜ್ಯದ ಜನತೆಯ ಎದುರು ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎನ್ನಲು ಇದಕ್ಕಿಂತ ಸಾಕ್ಷಿ ಬೇಕೇ?

17. ರೋಹಿತ್ ಚಕ್ರತೀರ್ಥ ಅವರ ಸಮಿತಿಗೆ ಸಿದ್ಧಗಂಗಾಮಠದ ಶ್ರೀಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಠದ ಶ್ರೀಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಯವರ ಮೇಲೆ ಇರುವ ದ್ವೇಷವಾದರೂ ಏನು? ಅವರ ಕುರಿತು ಹಿಂದಿನ ಪಠ್ಯದಲ್ಲಿ ಇದ್ದಂತಹ ವಿವರಗಳನ್ನು ಯಾಕೆ ತೆಗೆದು ಹಾಕಲಾಗಿದೆ? (ಹಿಂದಿನ 7ನೇ ತರಗತಿ ಸಮಾಜ ವಿಜ್ಞಾನ ಪುಟ 17-18)

18. ಬಿಜೆಪಿ ಸರ್ಕಾರವು ಈ ವಿಚಾರದಲ್ಲಿ ದುಷ್ಟ ರಾಜಕಾರಣಕ್ಕೆ ಇಳಿದಿದೆ. ಸಂಘಿ ಫಿಲಾಸಫಿಯನ್ನು ಹೇರಲು ಹುನ್ನಾರ ಹುಡುಕುತ್ತಿದೆ.

19. ನಾನು ಮುಖ್ಯಮಂತ್ರಿ ಇದ್ದಾಗ ಆಧುನಿಕ ಮೈಸೂರಿನ ಶಿಲ್ಪಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಲ್ಲಿ ಮೈಸೂರಿನಲ್ಲಿ ಅಧ್ಯಯನ ಪೀಠ ಮಾಡಿ 5 ಕೋಟಿ ರೂ ಹಣ ನೀಡಿದ್ದೆ.

20. ಹಾಗೆಯೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇರಿಸಿದ್ದೆವು.

21. ಜೊತೆಗೆ ಕೆಂಪೇಗೌಡರ ಅಭಿವೃದ್ಧಿ ಪ್ರಾಧಿಕಾರವನ್ನು 2016-17 ರ ಬಜೆಟ್ ನಲ್ಲಿ ಘೋಷಿಸಿ ವರ್ಷಕ್ಕೆ 5 ಕೋಟಿ ರೂಗಳನ್ನು ನೀಡಿದ್ದೆವು. 2018 ರಲ್ಲಿ ಅದಕ್ಕೊಂದು ಕಾಯ್ದೆಯ ಸ್ವರೂಪವನ್ನೂ ನೀಡಿದ್ದೆವು. ನಾವು ನಾಡು ಕಟ್ಟಿದ ಯಾವ ಮಹನೀಯರಿಗೂ ಅಗೌರವ ತೋರಿಲ್ಲ. ತೋರುವುದೂ ಇಲ್ಲ. ಇವ ನಮ್ಮವನೆಂದು ತಿಳಿದು ರಾಜಕಾರಣ ಮಾಡುವವರು ನಾವು . ಶ್ರೇಷ್ಠತೆಯ ಕೊಳಕನ್ನು ಎದೆಯಲ್ಲಿಟ್ಟುಕೊಂಡು ಬಿಜೆಪಿಯ ಹಿಂದಿನ ಶಕ್ತಿಗಳು ರಾಜಕಾರಣಕ್ಕೆ ಇಳಿದಿವೆ. ಇದನ್ನು ನಾವು ವಿರೋಧಿಸಲೇಬೇಕಾಗಿದೆ.

22. ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ರೋಹಿತ್ ಚಕ್ರತೀರ್ಥ ಸಮಿತಿಗೆ ಇರುವ ಅಸಹನೆಯಂತೂ ಹಸಿಹಸಿಯಾಗಿ ಪಠ್ಯ ಪರಿಷ್ಕರಣೆಯಲ್ಲಿ ಕಂಡು ಬಂದಿದೆ. ಅದಕ್ಕೆ ಇರುವ ನಿದರ್ಶನಗಳು: ಇದರಿಂದಾಗಿಯೆ 6 ನೇ ತರಗತಿ ಕನ್ನಡ ಪಠ್ಯದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಕುರಿತು ದಿ.ಚನ್ನಣ್ಣ ವಾಲೀಕಾರ್ ಅವರು ಬರೆದಿರುವ ‘ನೀ ಹೋದ ಮರುದಿನ’ ಎಂಬ ಪದ್ಯವನ್ನು ಕಿತ್ತು ಹಾಕಿದ್ದಾರೆ.

23. 7 ನೇ ತರಗತಿ ಸಮಾಜ ವಿಜ್ಞಾನ (ಭಾಗ ಎರಡು)ದಲ್ಲಿ ಅಂಬೇಡ್ಕರ್ ಮತ್ತು ಅವರ ಸುಧಾರಣೆಗಳು ಎಂಬ ಭಾಗದಲ್ಲಿ ಅಂಬೇಡ್ಕರ್ ಅವರ ಜನನ, ಹುಟ್ಟೂರು, ತಂದೆತಾಯಿಗಳ ಹೆಸರುಗಳು ತಿಳಿಸಲಾಗಿತ್ತು. ಅಂಬೇಡ್ಕರ್ ನಡೆಸಿದ ಮಹಾಡ್ ಸತ್ಯಾಗ್ರಹ ಮತ್ತು ಕಾಲಾರಾಂ ದೇಗುಲ ಪ್ರವೇಶ ಚಳವಳಿಗಳ ಕುರಿತು ಮಾಹಿತಿ ಇತ್ತು. ಇವುಗಳನ್ನು ಪರಿಷ್ಕøತ ಪಠ್ಯದಲ್ಲಿ ಕಿತ್ತು ಹಾಕಲಾಗಿದೆ.

24. 9ನೆಯ ತರಗತಿಯ ಸಮಾಜ ವಿಜ್ಞಾನದ ‘ನಮ್ಮ ಸಂವಿಧಾನ’ ಪಾಠದಲ್ಲಿ ಅಂಬೇಡ್ಕರ್ ಅವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗಿದೆ’ ಎಂಬ ವಾಕ್ಯವಿದ್ದುದನ್ನು ಕಿತ್ತು ಹಾಕಲಾಗಿದೆ. ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಗಿಂತಲೂ ಹೆಚ್ಚು ಪಾತ್ರ ವಹಿಸಿದವರು ಬಿ ಎನ್ ರಾವ್ ಎಂದು ಅರ್ಥ ಬರುವಂತೆ ಪಾಠವನ್ನು ರಚಿಸಲಾಗಿದೆ. ಇದರ ಹಿಂದಿನ ದುರುದ್ದೇಶವೇನು? ಅಂಬೇಡ್ಕರ್ ಅವರು ಸಂವಿಧಾನ ರಚಿಸುವಲ್ಲಿ ವಹಿಸಿದ ಪಾತ್ರದ ಬಗ್ಗೆ ಕನಿಷ್ಟ ತಿಳುವಳಿಕೆ ಇಲ್ಲದವರನ್ನು ಪಠ್ಯ ಪರಿಷ್ಕರಣೆಗೆ ಬಿಟ್ಟರೆ ಇಂತಹ ಮನುವಾದಿ ವಿಕೃತಿಗಳೆ ಮೆರೆಯುತ್ತವೆ.

25. 10 ನೇ ತರಗತಿ ಸಮಾಜ ವಿಜ್ಞಾನದಲ್ಲಿ (ಭಾಗ ಎರಡು ಪುಟ 19) ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆಯಿಂದ ಬೇಸತ್ತು ಹಿಂದೂ ಧರ್ಮ ತೊರೆದು ಜಾತಿ ಶ್ರೇಣೀಕರಣ ಮತ್ತು ಸಾಮಾಜಿಕ ಶ್ರೇಣೀಕರಣವನ್ನು ವಿರೋಧಿಸಿದ ಬೌದ್ಧ ಧರ್ಮವನ್ನು ಸ್ವೀಕರಿಸಿದರು ಎಂಬ ವಾಕ್ಯವನ್ನು ತಿರುಚಿ ಅಂಬೇಡ್ಕರ್ ‘ತಮ್ಮ ಇಳಿ ವಯಸ್ಸಿನಲ್ಲಿ ಬೌದ್ಧ ಧರ್ಮ ಸೇರಿದರು’ ಎಂದು ತಿರುಚಾಗಿದೆ.

26. ಅಸ್ಪೃಶ್ಯತೆಯ ನಿವಾರಣೆಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನಡೆಸಿದ ಪ್ರಯತ್ನಗಳ ವಿವರಗಳನ್ನು ಕಿತ್ತು ಹಾಕಲಾಗಿದೆ.

27. ಮಹಾನ್ ಸಾಮಾಜಿಕ ಹಾಗೂ ಸುಧಾರಕರಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತು ‘ಶ್ರೀನಾರಾಯಣಗುರು ಧರ್ಮಪಾಲನ ಯೋಗಂ ಎಂಬ ಪಾಠವನ್ನು 10 ನೇ ತರಗತಿ ಸಮಾಜ ವಿಜ್ಞಾನ ಪಠ್ಯದಿಂದ ಕಿತ್ತು ಹಾಕಲಾಗಿದೆ. ಇದಕ್ಕೆ ಈ ವರೆಗೂ ಯಾವುದೇ ಸಮರ್ಪಕ ಕಾರಣ ನೀಡಿಲ್ಲ. ತೆಗೆದು ಹಾಕಿರುವುದನ್ನು ಒಪ್ಪಿಕೊಳ್ಳುತ್ತಲೂ ಇಲ್ಲ. ಪ್ರತಿರೋಧ ಬಂದ ನಂತರ ಹತ್ತನೇ ತರಗತಿ ಕನ್ನಡ ಪಠ್ಯದಲ್ಲಿ ಪೂರಕ ಪಠ್ಯವಾಗಿ ಸೇರಿಸಲಾಗಿದೆ. ಇದು ಮೂಗಿಗೆ ತುಪ್ಪ ಒರೆಸುವ ತಂತ್ರವಷ್ಟೇ. ಹತ್ತನೆಯ ತರಗತಿಯ ಎಲ್ಲಾ 7 ಭಾಷೆಗಳ ಸಮಾಜ ವಿಜ್ಞಾನ ಪಠ್ಯಗಳಲ್ಲಿ ಮಕ್ಕಳು ಓದುವ ‘ನಾರಾಯಣ ಗುರು’ಗಳ ಪಠ್ಯವನ್ನು ಕನ್ನಡ ಭಾಷಾ ಪಠ್ಯಕ್ಕೆ ಹಾಕಿರುವುದರ ಹಕೀಕತ್ತು ಏನು? ಎಂಬುದನ್ನು ಕೋಟಾ ಶ್ರೀನಿವಾಸ ಪೂಜಾರಿ ಮುಂತಾದವರು ಹೇಳಬೇಕು.

28. ನಾಡಿನ ಸಾಂಸ್ಕøತಿಕ ಚೇತನವಾದ ಕನಕ ದಾಸರ ಕುರಿತು ಇದ್ದ ಭಾಗವನ್ನು (7ನೇ ತರಗತಿ ಸಮಾಜ ವಿಜ್ಞಾನ) ಕಿತ್ತು ಹಾಕಿರುವುದಕ್ಕೆ ಕಾರಣವೇನು? ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ‘ಜಾತಿ ವ್ಯಸನಿಗಳಿಗೆ’ ಬುದ್ದಿ ಹೇಳಿದ ಕನಕರನ್ನೇ ಕೈ ಬಿಟ್ಟಿರುವ ಪರಿಷ್ಕರಣ ಸಮಿತಿಯವರ ಕ್ರಮ ಅಕ್ಷಮ್ಯ.

29. ಸಮಾಜದಲ್ಲಿ ಅರ್ಧಕ್ಕರ್ಧ ಇರುವ ಮಹಿಳೆಯರ ಒಳಗಿನಿಂದ ಬರುವ ಸಮಾಜ ಸುಧಾರಕಿಯರು, ಸಾಧಕರನ್ನು ಉದ್ದೇಶಪೂರ್ವಕವಾಗಿ ಕೈ ಬಿಟ್ಟಿರುವುದಕ್ಕೆ ಏನಾದರೂ ಸಮರ್ಥನೆ ಇದೆಯೇ? ಶರಣೆ ಅಕ್ಕಮಹಾದೇವಿ, ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಾದ ರಾಣಿ ಅಬ್ಬಕ್ಕದೇವಿ, ಬಳ್ಳಾರಿ ಸಿದ್ದಮ್ಮ, ಕಮಲಾದೇವಿ ಚಟ್ಟೋಪಾದ್ಯಾಯ, ಯಶೋಧರಮ್ಮ ದಾಸಪ್ಪ, ಉಮಾಬಾಯಿ ಕುಂದಾಪುರ, ಹಾಗೆಯೇ ಮಹಿಳಾ ಸಮಾಜ ಸುಧಾರಕಿಯರಾದ ಸಾವಿತ್ರಿ ಬಾಯಿ ಫುಲೆ, ತಾರಾಬಾಯಿ ಶಿಂದೆ, ಪಂಡಿತಾ ರಮಾಬಾಯಿ ಕುರಿತು ಪಾಠಗಳನ್ನು ತೆಗೆದು ಹಾಕಿದ್ದು ಒಪ್ಪುವಂತದ್ದಲ್ಲ.

30. ಹಿಂದಿನ ಮುಡಿಬಂಡಿತ್ತಾಯ ಸಮಿತಿ ರಚಿಸಿದ ಸಮಾಜ ವಿಜ್ಞಾನ ಪಠ್ಯಗಳಲ್ಲಾಗಲೀ ಈಗಿನ ಚಕ್ರತೀರ್ಥ ಸಮಿತಿ ರಚಿಸಿದ ಸಮಾಜ ವಿಜ್ಞಾನ ಪಠ್ಯಗಳಲ್ಲಾಗಲೀ ದೇಶದ ಚರಿತ್ರೆಯನ್ನು ಕೇವಲ ವೈದಿಕ ಚರಿತ್ರೆ ಎಂದು ಕಟ್ಟಿ ಕೊಡುವುದರ ಹಿಂದಿನ ತಿಳುವಳಿಕೆ ದೋಷಪೂರಿತವಾಗಿದೆ. ದೇಶದ ಯಾವುದೇ ಚರಿತ್ರೆಯ ವಿದ್ವಾಂಸರು ಇಂತಹ ಒಂದು ತಪ್ಪು ತಿಳುವಳಿಕೆಯನ್ನು ಹೊಂದಿಲ್ಲ. ಭಾರತದ ನಿಜವಾದ ಸನಾತನ ಸಂಸ್ಕøತಿ ಎಂದರೆ ದ್ರಾವಿಡ ಭಾಷಿಕರು ಕಟ್ಟಿದ ಹರಪ್ಪಾ ಅಥವಾ ಸಿಂಧೂ ನದಿ ನಾಗರಿಕತೆ ಎಂದೂ ಅದರ ನಂತರದಲ್ಲಿ ಆರ್ಯರ ಮೂಲಕ ವೈದಿಕ ಸಂಸ್ಕøತಿ ದೇಶಕ್ಕೆ ಕಾಲಿಟ್ಟಿತು ಎಂದು ಇದುವರೆಗಿನ ಎಲ್ಲಾ ಇತಿಹಾಸ ವಿದ್ವಾಂಸರ ಹಾಗೂ ಪುರಾತತ್ವ ತಜ್ಞರ ಅಭಿಮತವಾಗಿದೆ. ಈಗ ಇದನ್ನು ತಿರುಚಲು ಹೊರಡಲಾಗಿದೆ.

31. ಪ್ರಸ್ತುತ ಬಿಜೆಪಿ ಸರ್ಕಾರ ರೋಹಿತ್ ಚಕ್ರತೀರ್ಥರ ಮೂಲಕ ಮಾಡಿಸಿರುವ ಅಧ್ವಾನಗಳನ್ನು ಹಲವು ರೀತಿಯಲ್ಲಿ ಗಮನಿಸಬೇಕಾಗಿದೆ. ಈ ಪಠ್ಯ ಪುಸ್ತಕ ಪರಿಷ್ಕರಣೆಯು ಸಂವಿಧಾನ ವಿರೋಧಿ ಆಶಯಗಳುಳ್ಳದ್ದಾಗಿದೆ., ಅಪ್ರತಾಂತ್ರಿಕ ನಿಲುವಿನದ್ದಾಗಿದೆ. ಬ್ರಾಹ್ಮಣ ಶ್ರೇಷ್ಠತೆಯನ್ನು ಎತ್ತಿ ಹಿಡಿದು ಶೂದ್ರ, ದಲಿತರ ಅಸ್ಮಿತೆಯನ್ನು ನಿರಾಕರಿಸುವುದಾಗಿದೆ, ಅಥವಾ ಕೀಳುಗಳೆಯುವುದಾಗಿದೆ. ವರ್ಣ- ಜಾತಿ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ಮಾಡಿ ದುಡಿಯುವ ವರ್ಗಗಳ ಪರವಾದ, ಮಾನವೀಯತೆಯ ಪರವಾದ ಹೋರಾಟ ಕಟ್ಟಿದ ಬುದ್ಧ, ಮಹಾವೀರ, ಬಸವಣ್ಣ, ಕನಕದಾಸರು , ನಾರಾಯಣ ಗುರುಗಳು, ಸಾವಿತ್ರಿಫುಲೆ, ಅಂಬೇಡ್ಕರ್, ಕುವೆಂಪು ಮುಂತಾದವರ ಚರಿತ್ರೆಯನ್ನು ನಿರಾಕರಿಸಿರುವುದು ಅಥವಾ ತಿರುಚಲು ಪ್ರಯತ್ನಿಸಿರುವುದು ಅಕ್ಷಮ್ಯ. ಹಾಗೆಯೆ ಸಾಮ್ರಾಜ್ಯ ಶಾಹಿಗಳ, ದೊಡ್ಡ ಸಾಮ್ರಾಜ್ಯಗಳ ವಿರುದ್ಧ ಯುದ್ಧ ಮಾಡಿದ ಅಬ್ಬಕ್ಕ ರಾಣಿ, ಕೆಂಪೇಗೌಡರು ಮುಂತಾದ ಮಹನೀಯರನ್ನು ನಿರ್ಲಕ್ಷಿಸಿರುವುದನ್ನು ಸಹಿಸುವುದು ಸಾಧ್ಯವಿಲ್ಲ.

32. ಬರಗೂರು ರಾಮಚಂದ್ರಪ್ಪನವರು ಇಂದು ವಿವರವಾದ ಮಾಹಿತಿಯನ್ನು ಇಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ನಾನು ಈ ಎಲ್ಲ ಅಂಶಗಳನ್ನು ಪರಿಶೀಲಿಸಿ ಈ ಹೇಳಿಕೆಯನ್ನು ಬಿಡುಗಡೆ ಮಾಡುತ್ತಿದ್ದೇನೆ.

33. ಈ ಹಿನ್ನೆಲೆಯಲ್ಲಿ ಬರಗೂರು ಸಮಿತಿಯ ನೇತೃತ್ವದಲ್ಲಿ ಇತಿಹಾಸ ತಜ್ಞರು ಬರೆದಿದ್ದ ಇತಿಹಾಸದ ಪಾಠಗಳಿಗೆ ವೈಜ್ಞಾನಿಕ ತಳಹದಿ ಇರುವುದರಿಂದ ಅವುಗಳನ್ನೇ ಮುಂದುವರಿಸಬೇಕು. ಜೊತೆಗೆ ಕನ್ನಡಿಗರಿಂದ ಬಂದಿರುವ ಪ್ರತಿರೋಧಗಳಿಂದಾಗಿ ಈಗಾಗಲೆ ಮುದ್ರಿಸಲಾಗಿದ್ದ ಪುಸ್ತಕಗಳನ್ನು ಹಿಂಪಡೆದು ಕೆಲವು ಸಂಗತಿಗಳನ್ನು ಮರು ಮುದ್ರಿಸಲಾಗಿದೆ ಎಂಬ ಮಾಹಿತಿ ಇದೆ. ಹಾಗಾಗಿ ಇಷ್ಟೂ ಹಣವನ್ನು ಸಂಬಂಧಿಸಿದವರಿಂದ ವಸೂಲು ಮಾಡಬೇಕು. ಪಠ್ಯ ಪುಸ್ತಕಗಳ ಬಗ್ಗೆ ಉದ್ಭವಿಸಿರುವ ಎಲ್ಲ ಅಂಶಗಳ ಕುರಿತು ಸರ್ಕಾರ ನಿಖರ ಮಾಹಿತಿಯನ್ನು ಜನರ ಮುಂದೆ ಮಂಡಿಸಬೇಕು. ಸುಳ್ಳು ಹೇಳುವುದಿಲ್ಲವೆಂದು, ಪಕ್ಷ ಪಾತ ಮಾಡುವುದಿಲ್ಲವೆಂದು ಹೇಳಿ ಅಧಿಕಾರ ಸ್ವೀಕರಿಸಿ ನಿನ್ನೆ ಪತ್ರಿಕಾ ಗೋಷ್ಠಿಯಲ್ಲಿ ನಾಡಿನ ಜನರಿಗೆ ಸುಳ್ಳು ಹೇಳಿರುವ ಸಚಿವರನ್ನು ವಜಾ ಮಾಡಬೇಕು. ಮಾಧ್ಯಮಗಳಿಗೆ ಸುಳ್ಳು ಮಾಹಿತಿ ಬಿಡುಗಡೆ ಮಾಡಿರುವ ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರ ಬೇಷರತ್ತಾಗಿ ನಾಡಿನ ಜನರ ಕ್ಷಮೆ ಕೇಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT