ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗಂದೂರು ಶಾಪ | ಸಿ.ಎಂ ಯಡಿಯೂರಪ್ಪಗೆ ಡಿನೋಟಿಫೈ ಕಂಟಕ -ಗೋಪಾಲಕೃಷ್ಣ ಬೇಳೂರು

Last Updated 28 ಡಿಸೆಂಬರ್ 2020, 10:54 IST
ಅಕ್ಷರ ಗಾತ್ರ

ಶಿವಮೊಗ್ಗ: ಸಿಗಂದೂರು ದೇವಿಯ ಶಾಪದ ಫಲವಾಗಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಡಿನೋಟಿಫೈ ಕಂಟಕ ಎದುರಾಗಿದೆ. ಜ.16ರ ಸಂಕ್ರಮಣದ ನಂತರ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಸಾಗರದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಿಗಂದೂರು ವಿಷಯಕ್ಕೆ ಕೈ ಹಾಕಿದರೆ ಮುಖ್ಯಮಂತ್ರಿಗೆ ಒಳ್ಳೆಯದಾಗುವುದಿಲ್ಲ ಎಂದು ಸಲಹೆ ನೀಡಿದ್ದೆ. ಮಾತು ಲೆಕ್ಕಿಸದೇ ಅವರು ಸಲಹಾ ಸಮಿತಿ ರಚನೆಗೆ ಸಮ್ಮತಿಸಿದ್ದರು. ಈಗ ಡಿನೋಟಿಫೈ ರೂಪದಲ್ಲಿ ಅವರಿಗೆ ಶಾಪ ತಟ್ಟಿದೆ. ಶೀಘ್ರ ತಮ್ಮ ಸ್ಥಾನ ತೊರೆಯಲಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಭವಿಷ್ಯ ನುಡಿದರು.

ಇಂತಹ ಆರೋಪಗಳು ಬಂದಾಗ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿ ಸ್ಥಾನದಲ್ಲೇ ಮುಂದುವರಿದರೆ ದಾಖಲೆಗಳನ್ನು ತಿದ್ದುವ ಸಾಧ್ಯತೆ ಇರುತ್ತದೆ. ರಾಜೀನಾಮೆ ಕೊಡುವಂತೆ ಅವರ ಪಕ್ಷದವರೇ ಒತ್ತಡ ಹಾಕಲಿದ್ದಾರೆ. ಕೆಳಗಿಳಿಸುವ ಸಂಚು ಅವರ ಪಕ್ಷದಲ್ಲೇ ನಡೆದಿದೆ. ಕತ್ತಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಯತ್ನಾಳ್ ಅವರ ವಿರುದ್ಧ ಧ್ವನಿ ಎತ್ತಿದ್ದಾರೆ. ಹೊಸ ಪಕ್ಷ ಕಟ್ಟುವ ಸೂಚನೆಗಳು ಹೊರ ಬೀಳುತ್ತಿವೆ. ಸಂಕ್ರಮಣದ ನಂತರ ಹೊಸ ಸುದ್ದಿ ಜನರಿಗೆ ದೊರಕಲಿದೆ ಎಂದರು.

ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ. ಮುಖ್ಯಮಂತ್ರಿಗೆ ನೆನಪಿನ ಶಕ್ತಿ ಇಲ್ಲವಾಗಿದೆ. ವಯಸ್ಸೂ ದಾಟಿದೆ. ಹಾಗಾಗಿ, ಅವರು ಸುಗಮ ಆಡಳಿತ ನಿರ್ವಹಣೆಯ ಸಾಮರ್ಥ್ಯ ಕಳೆದುಕೊಂಡಿದ್ದಾರೆ. ಅವರ ಪತನ ಖಚಿತ ಎಂದು ಕುಟುಕಿದರು.

ಹೊಸ ವರ್ಷದ ಆಚರಣೆ ರದ್ದು ಮಾಡುವ ನಿರ್ಧಾರದ ಹಿಂದೆ ಆರ್‌ಎಸ್‌ಎಸ್ ಅಜೆಂಡಾ ಇದೆ. ಗ್ರಾಮ ಪಂಚಾಯಿತಿ ಚುನಾವಣೆ ಸಮಯದಲ್ಲೇ ಸಾವಿರಾರು ಬಿಜೆಪಿ ಕಾರ್ಯಕರ್ತರು ಸೇರಿದ್ದರು. ಆಗ ಯಾವ ನಿಯಮವೂ ಕಾಣಲಿಲ್ಲ. ಈಗ ಹೊಸ ವರ್ಷ ಆಚರಣೆಗೆ ಏಕೆ ವಿರೋಧ? ರಾಮ ಜಯಂತಿಗೆ ಸಮ್ಮತಿಸುವ ಬಿಜೆಪಿ ಮುಖಂಡರಿಗೆ ಕ್ರಿಸ್‌ಮಸ್‌, ಹೊಸವರ್ಷ ಏಕೆ ಅಪಥ್ಯ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಹುಲ್ತಿಕೊಪ್ಪ ಶ್ರೀಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT