ಸುಬ್ರಹ್ಮಣ್ಯ: ‘ನಾನು ಗ್ರಾಮೀಣ ಭಾಗದಲ್ಲಿ ಬೆಳೆದಿದ್ದು, ನಮ್ಮ ಶಾಲೆಯೂ ಪ್ರಕೃತಿ ಮಡಿಲಲ್ಲಿದೆ. ಪರಿಸರ ಮತ್ತು ವಿಜ್ಞಾನವು ನನ್ನ ಇಷ್ಟದ ವಿಷಯ. ಅದಕ್ಕಾಗಿ ಐಎಫ್ಎಸ್ ಮಾಡಿ, ಅರಣ್ಯ–ವನ್ಯಜೀವಿ ರಕ್ಷಣೆ ಮಾಡಬೇಕು ಎಂಬುದು ನನ್ನ ತುಡಿತ...’
ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 625 ಅಂಕ ಪಡೆದಿರುವ ಇಲ್ಲಿನ ವಿದ್ಯಾನಗರದ ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ವಿದ್ಯಾರ್ಥಿ ಅನುಷ್ ಎ.ಎಲ್. ತನ್ನ ಕನಸುಗಳನ್ನು ಹಂಚಿಕೊಂಡರು.
ಮೆಸ್ಕಾಂ ಕಿರಿಯ ಎಂಜಿನಿಯರ್ ಆಗಿರುವ ಇಲ್ಲಿಗೆ ಸಮೀಪದ ಬಳ್ಪ ಗ್ರಾಮದ ಎಣ್ಣೆಮಜಲು ಲೋಕೇಶ್ ಮತ್ತು ಉಷಾ ದಂಪತಿ ಪುತ್ರ.
‘ಕೊರೊನಾ ಲಾಕ್ಡೌನ್ನಿಂದ ಓದಲು ಅವಕಾಶ ಸಿಕ್ಕಿತು. ಆದರೆ, ಶಿಕ್ಷಕರ ಹಾಗೂ ಹೆಚ್ಚುವರಿ ಪುಸ್ತಕಗಳ ಪ್ರಯೋಜನ ಪಡೆಯಲು ಹಿನ್ನಡೆಯಾಯಿತು. ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಂಡ ಕೂಡಲೇ ಪೂರ್ಣ ತಯಾರಿಯಲ್ಲಿ ತಲ್ಲೀನನಾದೆ’ ಎಂದು ಲಾಕ್ಡೌನ್ ಕುರಿತು ಪ್ರತಿಕ್ರಿಯಿಸಿದರು.
‘ವಿಜ್ಞಾನ ಮಾದರಿ ತಯಾರಿ, ಭಾಷಣ, ಕಾರ್ಯಕ್ರಮ ನಿರೂಪಣೆ ಹಾಗೂ ವಾಲಿಬಾಲ್ ಇತ್ಯಾದಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ನನ್ನ ಪಠ್ಯೇತರ ಆಸಕ್ತಿಗಳು. ಆದರೆ, ಪ್ರತಿನಿತ್ಯ ಐದು ಗಂಟೆ ಅಧ್ಯಯನ ಮಾಡುತ್ತಿದ್ದೆನು. ಯಾವುದೇ ಕೋಚಿಂಗ್ಗೆ ಹೋಗಿಲ್ಲ’ ಎಂದರು.
‘ಮೊದಲ ರ್ಯಾಂಕ್ ಎಂದು ಅಪ್ಪ ಹೇಳುವಾಗ, ಶಾಕ್, ಖುಷಿ ಎಲ್ಲವೂ ಒಮ್ಮೆಗೆ ಆಯಿತು’ ಎಂದು ಸಂಭ್ರಮಿಸಿದರು.