ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 496 ಮಂದಿಗೆ ಕೋವಿಡ್ ದೃಢಪಡುವುದರೊಂದಿಗೆ ಸೋಂಕಿಗೆ ಒಳಗಾದವರ ಒಟ್ಟಾರೆ ಸಂಖ್ಯೆ 9.28 ಲಕ್ಷಕ್ಕೆ ಏರಿದೆ.
ಬೆಂಗಳೂರು ನಗರ ಇಬ್ಬರು, ಬೀದರ್ ಮತ್ತು ಮೈಸೂರಿನಲ್ಲಿ ತಲಾ ಒಬ್ಬರು ಸೋಮವಾರ ಸಾವಿಗೀಡಾಗಿದ್ದಾರೆ. ಈ ಮೂರು ಜಿಲ್ಲೆಗಳನ್ನು ಹೊರತು ಪಡಿಸಿದರೆ ರಾಜ್ಯದ ಬೇರಾವುದೇ ಜಿಲ್ಲೆಯಲ್ಲಿ ಜ.11ರಂದು ಕೋವಿಡ್ನಿಂದ ಸಾವು ಸಂಭವಿಸಿಲ್ಲ. ನಾಲ್ವರ ಸಾವಿನೊಂದಿಗೆ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ 12,144ಕ್ಕೆ ಏರಿದೆ.
ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದ್ದು, 797 ಜನ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಈವರೆಗೆ 9.06 ಲಕ್ಷ ಜನ ಕೋವಿಡ್ನಿಂದ ಮುಕ್ತರಾಗಿದ್ದಾರೆ.
ಸಕ್ರಿಯ ಪ್ರಕರಣಗಳ ಪೈಕಿ 9,344 ಜನ ಆರೈಕೆ ಕೇಂದ್ರ, ಮನೆ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. 196 ಮಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸೋಮವಾರ 86,903 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಒಟ್ಟಾರೆ 1.53 ಕೋಟಿ ಮಂದಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ.
ಇಂಗ್ಲೆಂಡ್ನಿಂದ ರಾಜ್ಯಕ್ಕೆ ಬಂದಿರುವವರ ಪೈಕಿ ಈವರೆಗೆ 45 ಜನರಲ್ಲಿ ಕೋವಿಡ್ ದೃಢಪಟ್ಟಿದೆ. ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಪೈಕಿ 26 ಮಂದಿಗೂ ಸೋಂಕು ದೃಢಪಟ್ಟಿದೆ. ಇವರಲ್ಲಿ 11 ಜನರಿಗೆ ರೂಪಾಂತರ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.