ಎಂ.ಕೆ. ಹುಬ್ಬಳ್ಳಿ (ಬೆಳಗಾವಿ ಜಿಲ್ಲೆ): ಇಲ್ಲಿನ ಗಾಂಧಿ ನಗರದಲ್ಲಿ ಭಾನುವಾರ ಮೃತರಾದ ವೃದ್ಧರೊಬ್ಬರ ಅಂತಿಮ ಯಾತ್ರೆಗೆ ಸ್ಥಳೀಯರು ಬಾರದಿದ್ದರಿಂದ ಕುಟುಂಬದವರು ಶವವನ್ನು ಬೈಸಿಕಲ್ನಲ್ಲಿ ಮಳೆಯಲ್ಲೇ ಸಾಗಿಸಿದ ಘಟನೆ ನಡೆಯಿತು.
ಕೊರೊನಾ ಸೋಂಕಿನ ಭೀತಿಯಿಂದಾಗಿ ಜನರು ನೆರವಿಗೆ ಬರಲಿಲ್ಲ ಎನ್ನಲಾಗುತ್ತಿದೆ.
ಎರಡು ದಿನಗಳಿಂದ ಜ್ವರದಿಂದ ಬಳಲುತಿದ್ದ ಆ ವ್ಯಕ್ತಿಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಕೊರೊನಾ ಸೋಂಕಿನ ಲಕ್ಷಣಗಳಿದ್ದು ತಪಾಸಣೆ ಮಾಡಿಸಿಕೊಳ್ಳಿ ಎಂದು ವೈದ್ಯರು ತಿಳಿಸಿದ್ದರಿಂದ ಮನೆಗೆ ವಾಪಸಾಗಿದ್ದ ವೃದ್ಧ ಬೆಳಗಿನ ಜಾವ ಸಾವಿಗೀಡಾಗಿದ್ದಾರೆ.
‘ತಹಶೀಲ್ದಾರ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಸ್ಪಂದನೆ ಸಿಗಲಿಲ್ಲ. ಶವ ಸಾಗಿಸಲು ಖಾಸಗಿ ವಾಹನದವರೂ ಬರಲಿಲ್ಲ’ ಎಂದು ಕುಟುಂಬದವರು ಆರೋಪಿಸಿದರು
ಬೈಸಿಕಲ್ ಮೇಲೆ ಶವ ಸಾಗಿಸುತ್ತಿದ ವಿಷಯ ತಿಳಿದ ಪಟ್ಟಣ ಪಂಚಾಯಿತಿ ಸದಸ್ಯ ಪುಟ್ಟಪ್ಪ ಪಟ್ಟಣಶೆಟ್ಟಿ ವಾಹನದ ವ್ಯವಸ್ಥೆ ಮಾಡಿದರು. ಬಳಿಕ ಸ್ಥಳೀಯರು ಕೂಡ ಬಂದು ಅಂತ್ಯಕ್ರಿಯೆಗೆ ನೆರವಾದರು.