ಬೆಂಗಳೂರು: ‘ಕಾಂಗ್ರೆಸ್ ಬಿಟ್ಟು ಹೋದವರನ್ನು ಸೇರಿಸಿಕೊಳ್ಳುತ್ತೇವೆ ಎಂದು ನಾನು ಹೇಳಿಲ್ಲ. ಆದರೆ, ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬಂದವರಿಗೆ ಸ್ವಾಗತ ಎಂದಿದ್ದೇನೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬಿಜೆಪಿ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆಂಬ ವಿಚಾರದ ಕುರಿತುಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಕಾಂಗ್ರೆಸ್ ಬಿಟ್ಟು ಹೋದವರನ್ನು ಪಕ್ಷಕ್ಕೆ ಮತ್ತೆ ಸೇರಿಸಿಕೊಳ್ಳುವುದಿಲ್ಲವೆಂದು ಅಧಿವೇಶನದಲ್ಲಿಯೇ ನಾನು ಹೇಳಿದ್ದೇನೆ’ ಎಂದರು.
‘ಈ ವಿಚಾರವಾಗಿ ಯಾರ ಜೊತೆಗೂ ಮಾತನಾಡಿಲ್ಲ. ಅವರಾಗಿ ಬಂದರೆ ಮಾತ್ರ ಮಾತನಾಡುತ್ತೇನೆ. ಬೇರೆ ಪಕ್ಷಗಳಿಂದ ಸೇರುವವರು ನಾಳೆಯೇ ಬಂದು ಸೇರುತ್ತಾರೆ ಎಂದೂ ಹೇಳಿಲ್ಲ. ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ ಸೇರುತ್ತಾರೆ’ ಎಂದರು.
ವಿಧಾನಸಭೆ ಚುನಾವಣೆ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಸ್ಪರ್ಧಿಸುವಂತೆ ಕೋಲಾರ, ಕೊಪ್ಪಳ, ಚಾಮರಾಜಪೇಟೆ, ಹೆಬ್ಬಾಳ, ಚಾಮುಂಡೇಶ್ವರಿ, ವರುಣಾ, ಬಾದಾಮಿ ಹೀಗೆ 10 ಕ್ಷೇತ್ರಗಳಿಂದ ಆಹ್ವಾನ ಬರುತ್ತಿದೆ.ಹೈಕಮಾಂಡ್ ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ’ ಎಂದರು.