ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಬುಧವಾರ ನಡೆದ ಏರೊ ಇಂಡಿಯಾ–2021 ಉದ್ಘಾಟನಾ ಸಮಾರಂಭದಲ್ಲಿ ತ್ರಿಭಾಷಾ ಸೂತ್ರ ಮರೆಯಲಾಗಿದೆ. ಕನ್ನಡದ ನೆಲದಲ್ಲೇ ಕನ್ನಡಕ್ಕೆ ಅವಮಾನ ಮಾಡಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ‘ಭದ್ರಾವತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣಿಸಲಾಗಿತ್ತು. ಆ ಕಹಿ ನೆನಪು ಮರೆಯುವ ಮುನ್ನವೇ ಬೆಂಗಳೂರಿನಲ್ಲೂ ಕನ್ನಡಕ್ಕೆ ಅಪಚಾರ ಮಾಡಲಾಗಿದೆ. ಇದು ಅತ್ಯಂತ ನೋವಿನ ಸಂಗತಿ’ ಎಂದಿದ್ದಾರೆ.
ಏರೊ ಇಂಡಿಯಾ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ಫಲಕಗಳು ಮಾತ್ರ ರಾರಾಜಿಸುತ್ತಿದ್ದವು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಕಾರ್ಯಕ್ರಮ ಉದ್ಘಾಟಿಸಿದ್ದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಪಾಲ್ಗೊಂಡು ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ರಾಜ್ಯದ ಹಲವು ನಾಯಕರೂ ಸಮಾರಂಭದಲ್ಲಿದ್ದರು. ಕನ್ನಡಕ್ಕೆ ಅಪಮಾನ ಆಗಿರುವುದು ಯಾರಿಗೂ ಕಾಣಿಸಲಿಲ್ಲವೆ ಎಂದು ಪ್ರಶ್ನಿಸಿದ್ದಾರೆ.