ವಿರಾಜಪೇಟೆ (ಕೊಡಗು): ತಾಲ್ಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರುದ್ರಗುಪ್ಪೆ ಗ್ರಾಮದ ಕಾಫಿ ತೋಟವೊಂದರಲ್ಲಿ ಹುಲಿ ದಾಳಿ ನಡೆಸಿದ್ದು ಕಾರ್ಮಿಕ ಗಣೇಶ್ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಯ್ಯಪ್ಪ ಅವರ ತೋಟದಲ್ಲಿ ಗಣೇಶ್ ಸೇರಿದಂತೆ ಇಬ್ಬರು ಕಾರ್ಮಿಕರು ಸೋಮವಾರ ಕಾಳು ಮೆಣಸು ಕೊಯ್ಲು ಮಾಡುತ್ತಿದ್ದರು. ನೆಲದಲ್ಲಿ ಬಿದ್ದಿದ್ದ ಕಾಳು ಮೆಣಸು ಹೆಕ್ಕುವಾಗ ಹುಲಿ ದಾಳಿ ನಡೆಸಿದೆ. ಮತ್ತೊಬ್ಬ ಕಾರ್ಮಿಕ ಮರವನ್ನೇರಿ ಕಾಳುಮೆಣಸು ಕೊಯ್ಲು ಮಾಡುತ್ತಿದ್ದರ ಪರಿಣಾಮ ಅಪಾಯದಿಂದ ಪಾರಾಗಿದ್ದಾರೆ. ಬಳಿಕ ಹುಲಿ ಅಲ್ಲಿಂದ ಕಾಲ್ಕಿತ್ತಿದೆ ಎಂದು ಸ್ಥಳೀಯರು ತಿಳಿಸಿದರು.
ಎರಡು ದಿನಗಳ ಹಿಂದೆ ಗ್ರಾಮದ ಬೋಪಣ್ಣ ಅವರಿಗೆ ಸೇರಿದ ಹಸುವಿನ ಮೇಲೆ ಇದೇ ಹುಲಿ ನಡೆಸಿತ್ತು ಎಂದು ಗ್ರಾಮಸ್ಥರು ಮಾಹಿತಿ ನೀಡಿದರು.
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು. ಮೃತದೇಹವನ್ನು ಕೊಂಡೊಯ್ಯಲು ಬಿಡುವುದಿಲ್ಲ. ಜಿಲ್ಲೆಯಲ್ಲಿ ವನ್ಯಜೀವಿ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಕ್ರಮ ಕೈಗೊಂಡಿಲ್ಲ ಎಂದು ರೈತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
‘ಗ್ರಾಮದಲ್ಲಿ ಹುಲಿ ಸುಳಿದಾಡುತ್ತಿರುವ ಮಾಹಿತಿಯನ್ನು ಅರಣ್ಯ ಇಲಾಖೆಗೆ ನೀಡಲಾಗಿತ್ತು. ಆದರೆ, ಸೆರೆ ಹಿಡಿಯುವ ಕಾರ್ಯಾಚರಣೆ ವಿಳಂಬ ಮಾಡಲಾಗಿದೆ. ಈಗ ಹುಲಿ ಮನುಷ್ಯರ ಮೇಲೂ ದಾಳಿ ನಡೆಸಿ ಹುಲಿ ಅಪಾಯಕಾರಿ ಎನಿಸಿದೆ. ಕಾರ್ಮಿಕರು ಕೆಲಸಕ್ಕೆ ಬರಲು ಭಯ ಪಡುತ್ತಿದ್ದಾರೆ’ ಎಂದು ಗ್ರಾಮದ ಲೋಕನಾಥ್ ಆತಂಕ ವ್ಯಕ್ತಪಡಿಸಿದರು.
ಸ್ಥಳಕ್ಕೆ ಡಿವೈಎಸ್ಪಿ ಜಯಕುಮಾರ್, ಸಿಪಿಐ ಶ್ರೀಧರ್, ಗ್ರಾಮಾಂತರ ಠಾಣೆಯ ಪಿಎಸ್ಐ ಸಿದ್ದಲಿಂಗ ಬಿ ಬಾಣಸೆ ಭೇಟಿ ನೀಡಿ ಪರಿಶೀಲಿಸಿದರು.