ಮಂಗಳೂರು: ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಣಿ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧ ಪೊಲೀಸರು ಮತ್ತೆ ಇಬ್ಬರನ್ನು ಮಂಗಳವಾರ ಬಂಧಿಸಿದ್ದಾರೆ.
ಬೆಳ್ಳಾರೆ ಪಳ್ಳಿಮಜಲು ನಿವಾಸಿಗಳಾದ ಸದ್ದಾಂ (32) ಹಾಗೂ ಹ್ಯಾರಿಸ್ (42) ಬಂಧಿತರು. ಆರೋಪಿಗಳ ವಿರುದ್ಧ 1967ರ ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯ್ದೆಯ (ಯುಎಪಿಎ) ಸೆಕ್ಷನ್ 16 ಹಾಗೂ ಸೆಕ್ಷನ್ 18ರ ಅಡಿ ಎಫ್ಐಆರ್ ದಾಖಲಾಗಿದೆ.
ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿ ಆದವರ ವಿರುದ್ಧ ಯುಎಪಿಕಾಯ್ದೆಯ ಈ ಸೆಕ್ಷನ್ 16ರ ಅಡಿ ಪ್ರಕರಣ ದಾಖಲಿಸಲಾಗುತ್ತದೆ. ಭಯೋತ್ಪಾದನಾ ಚಟುವಟಿಕೆಯಿಂದ ವ್ಯಕ್ತಿ ಮೃತಪಟ್ಟಿದ್ದು ಸಾಬೀತಾದರೆ ಆರೋಪಿಗೆ ಮರಣದಂಡನೆ, ಜೀವಾವಧಿ ಶಿಕ್ಷೆ ಅಥವಾ ದಂಡ ವಿಧಿಸಲು ಯುಎಪಿ ಕಾಯ್ದೆಯ ಸೆಕ್ಷನ್ 16 (i) ಅವಕಾಶ ಕಲ್ಪಿಸುತ್ತದೆ. ಭಯೋತ್ಪಾದನಾ ಚಟುವ
ಟಿಕೆಗೆ ಸಂಚು ರೂಪಿಸಿದವರ ವಿರುದ್ಧ ಪ್ರಕರಣ ದಾಖಲಿಸಲು ಈ ಕಾಯ್ದೆಯ ಸೆಕ್ಷನ್ 18 ಅನ್ನು ಬಳಸಲಾಗುತ್ತದೆ.
‘ಪ್ರಕರಣದಲ್ಲಿ ಜಾಕೀರ್, ಶಫೀಕ್ ಅವರನ್ನು ಜು.28ರಂದು ಬಂಧಿಸಿದ್ದೆವು. ಅವರ ವಿಚಾರಣೆ ವೇಳೆ ಸಿಕ್ಕ ಸುಳಿವು ಆಧರಿಸಿ ಸದ್ದಾಂ ಹಾಗೂ ಹ್ಯಾರಿಸ್ನನ್ನು ಬಂಧಿಸಿದ್ದೇವೆ. ಬಂಧಿತ ನಾಲ್ವರೂ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದವರು. ಹತ್ಯೆ ನಡೆಸಿದವರು ಯಾರು ಎಂಬುದು ಖಚಿತವಾಗಿದೆ. ಮೂವರು ಸೇರಿ ಹತ್ಯೆ ನಡೆಸಿದ ಮಾಹಿತಿ ಇದೆ. ಅವರನ್ನು ಬಂಧಿಸಬೇಕಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ತಿಳಿಸಿದರು.
‘ತನಿಖೆ ಪೂರ್ಣಗೊಂಡ ಬಳಿಕವಷ್ಟೇ
ಈ ಘಟನೆ ಹಿಂದೆ ಯಾವುದಾದರೂ ಸಂಘಟನೆಯ ಕೈವಾಡ ಇದೆಯೋ ಎಂಬ ಬಗ್ಗೆ ಖಚಿತವಾಗಿ ಹೇಳಬಹುದು. ಕೃತ್ಯದ ಹಿಂದೆ ನಿರ್ದಿಷ್ಟ ಸಂಘಟನೆಯ ಪಾತ್ರ ಇದೆಯೇ ಎಂದು ಈ ಹಂತದಲ್ಲಿ ಹೇಳಲಾಗದು. ಒಂದೇ ಗ್ರಾಮದವರು ಸೇರಿ ಈ ಹತ್ಯೆಗೆ ಸಂಚು ರೂಪಿಸಿದ್ದಾರೆ. ಇದೊಂದು ಯೋಜಿತ ಕೃತ್ಯ ಎಂದಷ್ಟೇ ಹೇಳಬಲ್ಲೆ’ ಎಂದು ಸೋನಾವಣೆ ತಿಳಿಸಿದರು.
ಕೃತ್ಯದಲ್ಲಿ ಭಾಗಿಯಾಗಿದ್ದವರ ಜೊತೆ ನಂಟು ಹೊಂದಿದ್ದವರ ಚಲನವಲನಗಳ ಮೇಲೂ ಪೊಲಿಸರು ಕಣ್ಣಿಟ್ಟಿದ್ದಾರೆ. ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಸದ್ದಾಂ ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ಹೊಂದಿದ್ದಾನೆ. ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಇನ್ನೊಬ್ಬ ಆರೋಪಿ ಹಾಗೂ ಸದ್ದಾಂ, ಕೃತ್ಯ ನಡೆದ ದಿನ ಒಟ್ಟಿಗೆ ಇದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಮಸೂದ್ ಕೊಲೆ ಆದ ಬಳಿಕ ನಿರ್ಮಾಣವಾದ ಪರಿಸ್ಥಿತಿಯ ಲಾಭ ಪಡೆಯಲು ಕೊಲೆ ನಡೆಸಿರುವ ಸಾಧ್ಯತೆ ನಿಚ್ಚಳವಾಗಿದೆ. ಇಂತಹ ವ್ಯಕ್ತಿಯನ್ನೇ ಕೊಲ್ಲಬೇಕು ಎಂಬ ಬಗ್ಗೆ ಆರೋಪಿಗಳಿಗೆ ಖಚಿತತೆ ಇರಲಿಲ್ಲ. ನಿರ್ದಿಷ್ಟ ಸಮುದಾಯದ ಯಾರನ್ನಾದರೂ ಕೊಲೆ ನಡೆಸಲು ಆರೋಪಿಗಳು ಹೊಂಚು ಹಾಕಿದ್ದರು. ಆದರೆ ಅವರು ಕೊಲ್ಲಲು ಉದ್ದೇಶಿಸಿದ್ದ ವ್ಯಕ್ತಿಗಳು ಒಂಟಿಯಾಗಿ ಅವರ ಕೈಗೆ ಸಿಕ್ಕಿರಲಿಲ್ಲ. ಕೊನೆಗೆ ಸುಲಭದಲ್ಲಿ ಕೈಗೆ ಸಿಕ್ಕಿದ್ದ ಪ್ರವೀಣ್ ಅವರನ್ನು ಹತ್ಯೆ ಮಾಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಹತ್ಯೆಗೆ ಕೆಲವು ವ್ಯಕ್ತಿಗಳನ್ನು ಗುರಿಯಾಗಿ ಇಟ್ಟುಕೊಂಡಿದ್ದರ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ. ಅವರ ರಕ್ಷಣೆಗೆ ಕ್ರಮ ಕೈಗೊಂಡಿದ್ದೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.