ಬೆಂಗಳೂರು: ‘ಟಿಪ್ಪುವಿಗೆ ‘ಮೈಸೂರು ಹುಲಿ’ ಹಾಗೂ ‘ಸುಲ್ತಾನ್’ ಎಂಬ ಬಿರುದುಗಳನ್ನು ಕೊಟ್ಟವರು ಯಾರು. ಈ ಕುರಿತ ದಾಖಲೆಗಳು ಯಾರ ಬಳಿಯಾದರೂ ಇವೆಯೇ’ ಎಂದು ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಪ್ರಶ್ನಿಸಿದರು.
‘ಮಂಥನ’ ಹಮ್ಮಿಕೊಂಡಿದ್ದ ಮೇಕಿಂಗ್ ಆಫ್ ‘ದಿ ಕಾಶ್ಮೀರ್ ಫೈಲ್ಸ್’ ವಿಮರ್ಶೆ ಮತ್ತು ಸಂವಾದ’ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ‘ನಾವು ಸುಳ್ಳು ಇತಿಹಾಸಗಳನ್ನೇ ಸೃಷ್ಟಿಸುತ್ತಿದ್ದೇವೆ ಎಂಬುದಕ್ಕೆ ಇದೇ ನಿದರ್ಶನ’ ಎಂದರು.
‘ಕಾರ್ಕೋಟ ವಂಶದ ಲಲಿತಾದಿತ್ಯನುಕಾಶ್ಮೀರದ ಪ್ರಮುಖ ರಾಜ. ಈತ36 ವರ್ಷ ರಾಜ್ಯಭಾರ ಮಾಡಿದ್ದ. ಮಾರ್ತಾಂಡ ದೇವಸ್ಥಾನ ನಿರ್ಮಿಸಿ ಅಭಿವೃದ್ಧಿಪಡಿಸಿದ್ದ. ದೇಶದ ಎಲ್ಲಾ ವಿದ್ವಾಂಸರಿಗೆ ನೆಲೆ ಕಲ್ಪಿಸಿದ್ದ. ಹೀಗಾಗಿ ಈ ವರ್ಷದ ಪಠ್ಯಕ್ರಮದಲ್ಲಿ ಈತನ ಕುರಿತ ಪಾಠ ಸೇರ್ಪಡೆ ಮಾಡಿದ್ದೇವೆ’ ಎಂದು ತಿಳಿಸಿದರು.
‘ದೇಶದ ವಿವಿಧ ಪ್ರಾಂತ್ಯಗಳಲ್ಲಿ ಧೀಮಂತಿಕೆ ತೋರಿದವರ ಬಗ್ಗೆ ನಾವು ಅರಿಯದಿದ್ದರೆ ಈ ದೇಶ ಪರಕೀಯವಾಗಿಯೇ ಉಳಿಯಲಿದೆ. ಹೀಗಾಗಿಅಹೊಂ ರಾಜವಂಶದ ಕುರಿತ ಪಾಠವನ್ನೂ ಪಠ್ಯಕ್ರಮದಲ್ಲಿ ಪರಿಚಯಿಸಿದ್ದೇವೆ’ ಎಂದು ಹೇಳಿದರು.