ಕಕ್ಕೇರಾ(ಯಾದಗಿರಿ): ಇಲ್ಲಿ 12ನೇ ಶತಮಾನದ ಕಲ್ಯಾಣ ಕ್ರಾಂತಿಯ ಭಾಗವಾಗಿದ್ದ ಶರಣ ಡೋಹರ ಕಕ್ಕಯ್ಯನವರ ದೇವಸ್ಥಾನ ಗಮನಸೆಳೆಯುತ್ತದೆ.
ಈ ದೇಗುಲ ನಾಲ್ಕು ಸ್ತಂಭಗಳನ್ನು ಹೊಂದಿದೆ. ವಿಶೇಷವಾದ ಲಿಪಿಯಲ್ಲಿ ಬರೆಯಲಾಗಿದೆ. ಶಿವಲಿಂಗ ಹಾಗೂ ನಂದಿ ವಿಗ್ರಹಗಳೂ ಇಲ್ಲಿವೆ. ಗರ್ಭಗುಡಿ ಹಾಗೂ ಸುತ್ತಲಿನ ಗೋಡೆಗಳನ್ನು ಬೃಹತ್ ಕಲ್ಲುಗಳಿಂದ ನಿರ್ಮಿಸಲಾಗಿದೆ. ಇದು ಪ್ರಾಚಿನ ವಾಸ್ತುಶಿಲ್ಪ ವೈಭವವನ್ನು ನೆನಪಿಸುತ್ತದೆ.
ಈ ದೇಗುಲ ವಿಶ್ವಗುರು ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮದಲ್ಲಿರುವ ದೇವಾಲಯದ ಆಕಾರದಲ್ಲಿದೆ.
ಶರಣ ಡೋಹರ ಕಕ್ಕಯ್ಯ ಇಲ್ಲಿಗೆ ಬಂದು ವಿಶ್ರಾಂತಿ ಪಡೆದು ಇಲ್ಲಿಯೇ ಐಕ್ಯರಾಗಿದ್ದಾರೆ ಎಂದು ಹಿರಿಯರು ತಿಳಿಸುತ್ತಾರೆ.
‘ಶಿವರಾತ್ರಿಯಂದು ಭಕ್ತರು ವಿಶೇಷ ಪೂಜೆ ಸಲ್ಲಿಸುತ್ತಾರೆ. ಉಪವಾಸ ವ್ರತ ಕೈಗೊಂಡವರಿಗೆ ಬಾಳೆಹಣ್ಣು, ಖರ್ಜೂರ, ಪ್ರಸಾದ ವಿತರಣೆ ಮಾಡಲಾಗುತ್ತದೆ. ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗುತ್ತದೆ’ ಎಂದು ವೀರಭದ್ರಯ್ಯ ಸ್ವಾಮಿ ತಿಳಿಸುತ್ತಾರೆ.
‘ಬಸವಸೇವಾ ಸಮಿತಿ ವತಿಯಿಂದ ದೇವಾಲಯದಲ್ಲಿ ಪ್ರತಿ ಹುಣ್ಣಿಮೆಯ ದಿನ ಅರಿವು–ಆಚಾರ ಕಾರ್ಯಕ್ರಮ ನಡೆಯುತ್ತದೆ. ಪ್ರತಿ ಗುರುವಾರ ಮನೆ–ಮನೆ ಬಸವ ಬೆಳಗು ಇಷ್ಟಲಿಂಗ ಕಾರ್ಯಕ್ರಮವನ್ನೂ ಮಾಡಲಾಗುತ್ತದೆ. ಸಮಿತಿ ಕಾರ್ಯ ಶ್ಲಾಘನೀಯ’ ಎಂದು ಹಾಲುಮತ ಸಮಾಜದ ಮುಖಂಡ ನಿಂಗಯ್ಯ ಬೂದಗುಂಪಿ ಹೇಳಿದರು.
ಈ ಹಿಂದೆ ಈ ದೇಗುಲ ಪಾಳುಬಿದ್ದಿತ್ತು. ಬಸವ ಸೇವಾ ಸಮಿತಿಯ ಪದಾಧಿಕಾರಿಗಳು ಊರಿನ ಹಿರಿಯರ ಸಹಾಯದಿಂದ ದೇವಾಲಯ ಆವರಣಕ್ಕೆ ಬಂಡೆ ಹಾಸಿದರು. ಆದ್ದರಿಂದ ಈಗ ಇದು ಗಮನಸೆಳೆಯುತ್ತಿದೆ.
‘ಶರಣ ಡೋಹರ ಕಕ್ಕಯ್ಯನವರ ದೇವಸ್ಥಾನ ನವೀಕರಿಸಬೇಕು. ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದು ಬಸವಾ ಸೇವಾ ಸಮಿತಿ ಸದಸ್ಯನಂದಯ್ಯಸ್ವಾಮಿ ಒತ್ತಾಯಿಸುತ್ತಾರೆ.