1993ರಲ್ಲಿ ಈ ಆಂಗ್ಲ ಅನುವಾದದ ಆತ್ಮಕಥೆ ನನ್ನ ಕೈಗೆ ಸೇರಿತು. ಈ ಪುಸ್ತಕದ ಸಹಜ ಬರಹ ನನ್ನನ್ನು ಸೂಜಿಗಲ್ಲಿನಂತೆ ಆಕರ್ಷಿಸಿತು. ಆಕೆಯ ರೋಚಕ, ಹಲವೊಮ್ಮ ಹೃದಯವಿದ್ರಾವಕ ಜೀವನ ಇನ್ನಿಲ್ಲದಂತೆ ಕಾಡತೊಡಗಿತು. ಈ ಕೃತಿಯನ್ನು 1995ರಲ್ಲಿ ಕನ್ನಡಕ್ಕೆ ಅನುವಾದಿಸಿದೆ. ಈಗ ಎರಡು ದಶಕಗಳ ನಂತರ 2015ರಲ್ಲಿ ಗೆಳೆಯ, ಮೆ.ಸಂಪದ ಪಬ್ಲಿಕೇಷನ್ಸ್ನ ಸಂಸ್ಥೆಯ ಜನರಲ್ ಮ್ಯಾನೇಜರ್ ಶ್ರೀವಿನಾಯಕ್ ಇವರು ಚಾರಿತ್ರಿಕ ದಾಖಲೆಯ ಮಹತ್ವವನ್ನು ಪರಿಗಣಿಸಿ, ‘ಜಹನಾರಾ–ಹಿಂದೂ ಮಹಾರಾಣಿಯಾಗಲು ಭ್ರಮಿಸಿದ್ದ ಮೊಗಲ್ ಬಾದಶಹ ಬೇಗಮ್ಳ ದುರಂತ ಜೀವನ ಸ್ಮೃತಿ’ ಎಂಬ ಹೆಸರಿನಲ್ಲಿ ಪುಸ್ತಕವನ್ನು ಪ್ರಕಟಿಸಿದ್ದಾರೆ. ಸದರಿ ಪುಸ್ತಕವನ್ನು ಸಹೃದಯ ಓದುಗರ ಮುಂದಿಡಲು ಹರ್ಷಿಸುತ್ತೇನೆ.