ವಜ್ರ ಮಹೋತ್ಸವ ಆಚರಿಸಿಕೊಳ್ಳುವ ಸಂಭ್ರಮದಲ್ಲಿರುವ ಕಾಯರ್ ಬೋರ್ಡ್ ನಗರದಲ್ಲಿ ಫೆ.16ರಿಂದ 20ರವರೆಗೆ `ಕರ್ನಾಟಕ ಕಾಯರ್ ಎಕ್ಸ್ಪೊ 2013' ಆಯೋಜಿಸಿದೆ. ಐದು ದಿನ ನಡೆವ ಈ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ತೆಂಗಿನ ನಾರಿನಿಂದ ತಯಾರಿಸಿದ ವಿಭಿನ್ನ ಉತ್ಪನ್ನಗಳ ದೊಡ್ಡ ಸಂಗ್ರಹ ಒಂದೇ ಸೂರಿನಡಿಯಲ್ಲಿ ಅನಾವರಣಗೊಳ್ಳಲಿವೆ.
ಕಳೆದ ಆರು ವರ್ಷಗಳಿಂದೀಚೆಗೆ ನಾರು ಉದ್ಯಮದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಸಾಕಷ್ಟು ಸಂಶೋಧನೆಗಳು ನಡೆದಿವೆ. ಉತ್ಪನ್ನಗಳ ತಯಾರಿಕೆಯಲ್ಲಿ ತಂತ್ರಜ್ಞಾನ ಅಳವಡಿಕೆಯಿಂದಾಗಿ ಉತ್ಪನ್ನಗಳ ಚೆಲುವು ಕೂಡ ಇಮ್ಮಡಿಗೊಂಡಿದೆ. ನಾರಿನ ಉತ್ಪನ್ನಗಳು ಹೊಸ ಸ್ಪರ್ಶ ಪಡೆದುಕೊಂಡ ನಂತರ ಮಾರುಕಟ್ಟೆ ಕೂಡ ಸಾಕಷ್ಟು ವಿಸ್ತರಣೆಗೊಂಡಿದೆ. ತಂತ್ರಜ್ಞಾನ ಹಾಗೂ ಕುಶಲಕರ್ಮಿಗಳ ಕೌಶಲದ ಮೂಸೆಯೊಳಗಿಂದ ಹೊರಬಂದಿರುವ ತೆಂಗಿನ ನಾರಿನ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ಜತೆಗೆ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ನಡೆಯಲಿವೆ.
ಫೆ.16ರಂದು ಪ್ರಾರಂಭಗೊಳ್ಳಲಿರುವ ಪ್ರದರ್ಶನವನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಉದ್ಘಾಟಿಸಲಿದ್ದಾರೆ. ಸಚಿವ ಕೆ.ಎಚ್.ಮುನಿಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಸ್ಥಳ: ಗಾಯತ್ರಿ ವಿಹಾರ, ಅರಮನೆ ಮೈದಾನ.