ಪರಸ್ಥಳದಿಂದ ಬಂದು ಬೆಂಗಳೂರಿನಲ್ಲಿ ನೆಲಸಿರುವವರು ಇತರ ರಾಜ್ಯಗಳಲ್ಲಿ ಸಂಚರಿಸಿ ಬಂದ ಮೇಲೆ ತಮಗಾದ ಅನುಭವದ ಕುರಿತು ಮಾತನಾಡುವಾಗ ‘ಅಲ್ಲಿಗೆ ಹೋಗಿದ್ದರಿಂದ ನಮಗೆ ಬೆಂಗಳೂರು ಬೆಲೆ ಗೊತ್ತಾಯ್ತು’ ಎಂದು ಮಾತು ಆರಂಭಿಸುತ್ತಾರೆ.
ಅದೇ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನನ್ನಂಥವರಿಗೆ ಎಲ್ಲಿಗೆ ಹೋದರೂ ಬೆಂಗಳೂರು ಬೆಲೆ ಗೊತ್ತೇ ಇರುತ್ತದೆ. ಬೆಂಗಳೂರು ನಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೆಂಗಳೂರು ಅಂದೊಡನೆ ಕಣ್ಮುಂದೆ ಬಂದು ನಿಲ್ಲೋದು ಹಸಿರೆಲೆ ಹೊದ್ದ ಮರಗಳು, ಉದ್ಯಾನವನಗಳು ಹಾಗೂ ಯಾವುದೇ ಕಾಲದಲ್ಲೂ ತಣ್ಣಗೆ ಮೈ ತಾಗುವ ಚುಮುಚುಮು ಗಾಳಿ ಈ ನೆಲದ ವಿಶೇಷ. ಜಾತಿ, ಧರ್ಮ, ಭಾಷೆ ಮರೆತು ಬದುಕುವ ಪರಿಶುಭ್ರ ವಾತಾವರಣಕ್ಕೆ ಹೇಳಿ ಮಾಡಿಸಿದ ನಗರ ಬೆಂಗಳೂರು.
ಕಣ್ಮನ ತಣಿಸುವ ಎಂ.ಜಿ.ರಸ್ತೆ, ಮೆಟ್ರೊ ರೈಲು, ರುಚಿಪ್ರಿಯರ ಸೆಳೆವ ಗಾಂಧಿಬಜಾರ್, ಚಾಮರಾಜ ಪೇಟೆಯಲ್ಲಿರುವ ಟಿಪ್ಪುವಿನ ಬೇಸಿಗೆ ಅರಮನೆ, ಮಹಾರಾಜರು ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತು, ದೇಗುಲಗಳ ಮಲ್ಲೇಶ್ವರಂ, ನಿಂತರೆ ಮುಂದೆ ಸಾಗಲು ಅವಕಾಶ ಕೊಡದೆ ಕಾಲಿಗೆ ಅಂಟಿಕೊಂಡೇ ಬಿಡುವ 8ನೇ ಕ್ರಾಸ್, ನಿದ್ದೆ ಮಾಡದೇ ಸದಾ ಎಚ್ಚರವಾಗಿಯೇ ಇರುವ ಶಿವಾಜಿನಗರ, ಮೆಜೆಸ್ಟಿಕ್, ಕಲಾಸಿಪಾಳ್ಯ, ಕನ್ನಡ ಸಂಸ್ಕೃತಿ ಹಿರಿಮೆಯ ಪುರಭವನ, ರವೀಂದ್ರ ಕಲಾಕ್ಷೇತ್ರ... ಇವೆಲ್ಲವೂ ಈ ನಗರವನ್ನು ಪ್ರೀತಿಸುವವರ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಇದೆ.
ಬೆಂಗಳೂರು ಎಂಬುದು ಕೇವಲ ಊರಲ್ಲ; ಶಾಂತಿ, ಸಹನೆ, ಸಹಬಾಳ್ವೆಯನ್ನು ಉಳಿಸಿಕೊಂಡಿರುವ ಪುಟ್ಟ ಭಾರತ.