ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿತೆರೆಗೆ ಜಿಗಿದ ಪುತ್ತೂರಿನ ಬೆಡಗಿ

ಚೆಲುವಿನ ಚಿತ್ತಾರ
Last Updated 17 ಜನವರಿ 2017, 19:30 IST
ಅಕ್ಷರ ಗಾತ್ರ
ಪ್ರತಿಭೆಗೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತೆ. ಕಲಾ ಸೇವೆಯಲ್ಲಿ ತೊಡಗಿದವರನ್ನು ಕಲಾ ಮಾತೆ ಎಂದೂ ಕೈಬಿಡುವುದಿಲ್ಲ ಎಂಬುದು ಬಲ್ಲವರ ಮಾತು. ಭರತನಾಟ್ಯ ಪ್ರತಿಭೆಯ ಮೂಲಕ ಕನ್ನಡ ಬೆಳ್ಳಿತೆರೆಗೆ ಕಾಲಿಟ್ಟ ಪುತ್ತೂರಿನ ಈ ಬೆಡಗಿಯ ಪಾಲಿಗೆ ಈ ಮಾತು ಅಕ್ಷರಶಃ ಸತ್ಯವಾಗಿದೆ.
 
ಭರತನಾಟ್ಯ ಪ್ರವೀಣೆ ಪುತ್ತೂರಿನ ಅನುಷಾ ಹೆಗ್ಡೆ ಅವರೇ ಕಲಾರಾಧನೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಿಕೊಂಡವರು. ಇದೇ 30ರಂದು ತೆರೆ ಕಾಣಲಿರುವ ‘ಎನ್.ಎಚ್-37’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ‘ಬಣ್ಣಬಣ್ಣದ ಬದುಕು’ ಚಿತ್ರದಲ್ಲಿ ನೃತ್ಯ ನಿರ್ದೇಶಕಿಯಾಗಿ ಕೆಲಸ ಮಾಡಿರುವುದರ ಜತೆಗೆ ಅತಿಥಿ ಕಲಾವಿದೆಯಾಗಿಯೂ ಬಣ್ಣ ಹಚ್ಚಿದ್ದರು. ಇದರ ಜತೆಯಲ್ಲೆ ಕಿರುತೆರೆಗೂ ಪದಾರ್ಪಣೆ ಮಾಡಿದ್ದರು.
 
ನೃತ್ಯ ಎನ್ನುವುದು ಅನುಷಾ ಅವರ ಆಸಕ್ತಿಯ ಕ್ಷೇತ್ರ. ಒಂದನೇ ತರಗತಿಯಲ್ಲಿರುವಾಗಲೇ ಭರತನಾಟ್ಯ ಅಭ್ಯಾಸಕ್ಕಿಳಿದು ಕಲಿಕೆಯ ಜತೆ ಜತೆಯಲ್ಲೇ ಭರತನಾಟ್ಯದಲ್ಲಿ ವಿದ್ವತ್ ಪಡೆದುಕೊಂಡವರು. ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ಒಂದನೇ ತರಗತಿಯಿಂದ ಪದವಿ ತನಕ ವಿದ್ಯಾಭ್ಯಾಸ ಮಾಡಿರುವ ಅವರು ಬಿ.ಕಾಂ ಪದವೀಧರೆ. ಇದೀಗ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ದೂರ ಶಿಕ್ಷಣದಲ್ಲಿ ಎಂ.ಕಾಂ ಮತ್ತು ಭರತನಾಟ್ಯದಲ್ಲಿ ಎಂ.ಎ. ಮಾಡುವ ತಯಾರಿ ನಡೆಸುತ್ತಿದ್ದಾರೆ. ಈ ನಡುವೆ ಅವರ ಪ್ರತಿಭೆಯನ್ನು ಗುರುತಿಸಿ ಚಿತ್ರರಂಗ ಮತ್ತು ಕಿರುತೆರೆಯವರು ಅವಕಾಶ ನೀಡಿದ್ದಾರೆ. ಇದು ಅವರ ಪಾಲಿಗೆ ಬಯಸದೆ ಬಂದ ಭಾಗ್ಯವೂ ಹೌದು.
 
ನಾಟ್ಯಗುರುಗಳಾದ ಕರ್ನಾಟಕ ಕಲಾಶ್ರೀ ವಿದ್ವಾನ್ ಕುಡ್ಕಾಡಿ ವಿಶ್ವನಾಥ ರೈ ಮತ್ತು ವಿದುಷಿ ನಯನಾ ವಿ.ರೈ ಅವರಿಂದ ಭರತನಾಟ್ಯ ಅಭ್ಯಾಸ ಮಾಡಿದ್ದ ಅನುಷಾ ಹೆಗ್ಡೆ, ಸುಮಾರು 800ಕ್ಕೂ ಅಧಿಕ ಭರತನಾಟ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಎಲ್ಲ ರೀತಿಯ ನೃತ್ಯ ನಿರ್ದೇಶನಗಳನ್ನು ಮಾಡಬಲ್ಲ ಚಾಕಚಕ್ಯತೆ ಹೊಂದಿರುವ ಅವರು ರಂಗಭೂಮಿ ನಟನೆ ಹಾಗೂ ಹಾಡುಗಾರಿಕೆಯಲ್ಲೂ ಗಮನ ಸೆಳೆದಿದ್ದಾರೆ. ಯೋಗಾಭ್ಯಾಸದಲ್ಲೂ ಪರಿಣತಿ ಪಡೆದಿದ್ದಾರೆ. ಈ ಎಲ್ಲ ಪ್ರತಿಭೆಗಳೇ ಅವರಿಗೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುವ ಅವಕಾಶ ತಂದು ಕೊಟ್ಟಿದೆ.
 
ಅನುಷಾ ಹೆಗ್ಡೆ ಬೆಳ್ಳಿತೆರೆಗೆ ಕಾಲಿಡಬೇಕೆಂದು ಕನಸು ಕಂಡವರಲ್ಲ. ಕಿರುತೆರೆಯ ಯೋಜನೆಯೂ ಅವರಲ್ಲಿರಲಿಲ್ಲ. ಕುಟುಂಬದ ಗೆಳೆಯರಾಗಿದ್ದ ಬಂಟ್ವಾಳದ ರೋಹಿತ್ ಶೆಟ್ಟಿ ಅವರು ತನ್ನ ಸ್ನೇಹಿತರಾಗಿದ್ದ ಚಿತ್ರನಿರ್ದೇಶಕ ಹರ್ಷವರ್ಧನ್, ನಿರ್ಮಾಪಕರಾದ ರವಿ ಮತ್ತು ರಮೇಶ್ ಅವರಿಗೆ ಅನುಷಾ ಹೆಗ್ಡೆಯನ್ನು ಪರಿಚಯಿಸಿದ್ದರು. ಇದರಿಂದಾಗಿಯೇ ಅನುಷಾ ಹೆಗ್ಡೆ ಪ್ರಥಮ ಸಂದರ್ಶನದಲ್ಲೇ ಆಯ್ಕೆಯಾಗಿ ಎನ್.ಎಚ್.37 ಚಿತ್ರದ ನಾಯಕಿಯಾಗುವ ಅವಕಾಶ ಗಿಟ್ಟಿಸಿಕೊಂಡರು.
 
ಎನ್.ಎಚ್.37 ಚಿತ್ರದಲ್ಲಿ ನಟಸುತ್ತಿದ್ದಾಗಲೇ ‘ಬಣ್ಣಬಣ್ಣದ ಬದುಕು’ ಚಿತ್ರದಲ್ಲಿ ನೃತ್ಯ ನಿರ್ದೇಶಕಿಯಾಗಿಯೂ ಕೆಲಸ ಮಾಡಿ ಆ ಚಿತ್ರದಲ್ಲಿ ಅತಿಥಿ ಪಾತ್ರವನ್ನೂ ನಿಭಾಯಿಸಿದರು.
 
ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ‘ರಾಧಾ ರಮಣ’ ಧಾರಾವಾಹಿಯಲ್ಲಿ ವಿಲನ್‌ ರೋಲ್‌ನಲ್ಲಿ  ಕಾಣಿಸಿಕೊಳ್ಳುತ್ತಿದ್ದಾರೆ.
 
‘ಭರತನಾಟ್ಯ ಮತ್ತು ನೃತ್ಯದಲ್ಲಿ ಹಿಡಿತವಿರುವುದರಿಂದ ಚಿತ್ರರಂಗದಲ್ಲಿ ನಟನೆ ಮಾಡಲು ಸುಲಭವಾಯಿತು. ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಇನ್ನೂ ಎರಡು ಅವಕಾಶಗಳು ಬಂದಿವೆ. ಜೀವನಾಧಾರಕ್ಕಾಗಿ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಮುಂದೆ ಸಾಗುತ್ತೇನೆ. ಆದರೆ, ನೃತ್ಯವನ್ನು ಎಂದಿಗೂ ಬಿಡುವು ದಿಲ್ಲ. ಅವಕಾಶ ಸಿಕ್ಕಿದ ಕಡೆಗಳಲ್ಲಿ ಪ್ರದರ್ಶನ ನೀಡುತ್ತೇನೆ’ ಎನ್ನುವ ಅನುಷಾ ಹೆಗ್ಡೆ ಪುತ್ತೂರಿನ ಉರ್ಲಾಂಡಿ ನಿವಾಸಿ ಉಮೇಶ್ ಹೆಗ್ಡೆ ಮತ್ತು ಸ್ವರ್ಣಲತಾ ಹೆಗ್ಡೆ ದಂಪತಿಯ ಪುತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT