‘ಪರೇಡ್’ ಎಂಬ ಶಬ್ದ ಕಿವಿಯ ಮೇಲೆ ಬಿದ್ದರೆ ಸಾಕು ಕೇಳಿಸಿಕೊಂಡವರ ಮೈಮೇಲಿನ ರೋಮಗಳೆಲ್ಲವೂ ಸೆಟೆದು ನಿಲ್ಲುತ್ತವೆ. ದೇಶಭಕ್ತರಿಗೆ ಆ ಶಬ್ದ ಹೊಮ್ಮಿಸುವ ಅನುಭವವೇ ಬೇರೆ. ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ)ನಲ್ಲಿ ತರಬೇತಿ ಪಡೆದ ಸೈನಿಕರ ನಿರ್ಗಮನ ಪಥಸಂಚಲನ ಈಚೆಗೆ ಬೆಂಗಳೂರಿನಲ್ಲಿ ನಡೆಯಿತು. ‘ಪರೇಡ್’ ಎಂಬ ಶಬ್ದಕ್ಕೆ ಕಿವಿಯಾದ ನೂರಾರು ಸೈನಿಕರು ಎದೆಯುಬ್ಬಿಸಿ ನಿಂತರು. ತುಕಡಿಯ ನಾಯಕನ ಆದೇಶಕ್ಕೆ ಅನುಗುಣವಾಗಿ ಆಕರ್ಷಕ ಮಾರ್ಚ್ ಪಾಸ್ಟ್ ಮಾಡುತ್ತ ವೀಕ್ಷಕರ ಎದೆಯಲ್ಲಿ ದೇಶಭಕ್ತಿಯ ಪುಳಕ ಮೂಡಿಸಿದರು. ಈ ವೇಳೆ, ಸೈನ್ಯ ಸೇರಿದ ಮಕ್ಕಳ ನಿರ್ಗಮನ ಪಥಸಂಚಲನ ನೋಡಲು ಬಂದಿದ್ದ ಪೋಷಕರ ಕಣ್ಣಲ್ಲೂ ದೇಶಾಭಿಮಾನದ ಮಿಂಚು ಸುಳಿದಾಡಿತು. ದೂರದ ಹಳ್ಳಿಯಿಂದ ಬಂದಿದ್ದ ಅಪ್ಪನೊಬ್ಬ ಮಗನಿಗೆ ಕೆನ್ನೆಗೆ ಮುತ್ತಿಟ್ಟು ಅಪ್ರತಿಮ ಯೋಧನಾಗು ಎಂದು ಹರಸಿದ್ದು, ಪಥಸಂಚಲನ ಮುಗಿದ ನಂತರ ಮಗಳೊಟ್ಟಿಗೆ ಸೈನಿಕನೊಬ್ಬ ಆಟವಾಡಿದ್ದು, ಮಗನನ್ನು ಬೀಳ್ಕೋಡಬೇಕಲ್ಲ ಎಂಬ ದುಃಖದಲ್ಲಿ ತಾಯಿಯೊಬ್ಬಳು ತುಟಿಕಚ್ಚಿ ಬಿಕ್ಕಿದ್ದು ಇಂತಹ ಭಾವುಕ ಕ್ಷಣಗಳನ್ನು ಸೆರೆಹಿಡಿದಿದ್ದು ರಂಜು ಪಿ.