ಶಿರಸಿ: ಕಾಲಿಗೆ ಗಾಯವಾಗಿದ್ದ ತಮ್ಮ ತಾಯಿಗೆ ವೈದ್ಯರು ಸಕಾಲದಲ್ಲಿ ಚಿಕಿತ್ಸೆ ನೀಡಲಿಲ್ಲ ಎಂದು ಆರೋಪಿಸಿ, ಉತ್ತರಕನ್ನಡ ಸಂಸದ ಅನಂತಕುಮಾರ ಹೆಗಡೆ ಸೋಮವಾರ ರಾತ್ರಿ ಇಲ್ಲಿನ ಟಿಎಸ್ಎಸ್ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಥಳಿಸಿದ ಘಟನೆ ವರದಿಯಾಗಿದೆ.
ಮನೆಯಲ್ಲಿ ಬಿದ್ದು ಗಾಯಗೊಂಡಿದ್ದ ಅವರ ತಾಯಿ ಲಲಿತಾ ಹೆಗಡೆ ಸಂಬಂಧಿಕರೊಂದಿಗೆ ಸಂಜೆ 7ರ ಸುಮಾರಿಗೆ ಇಲ್ಲಿನ ಟಿ.ಎಸ್.ಎಸ್ ಆಸ್ಪತ್ರೆಗೆ ಬಂದಿದ್ದರು.
ಅವರನ್ನು ಪರೀಕ್ಷಿಸಿದ ಎಲುಬು ಮತ್ತು ಕೀಲು ತಜ್ಞ ಡಾ. ಜಿ.ವಿ.ಮಧುಕೇಶ್ವರ, ಮೂಳೆ ಮುರಿದಿದೆ ಎಂದು ತಿಳಿಸಿ, ಮತ್ತೊಬ್ಬ ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಲು ಹೋಗಿದ್ದರು. ಹಾಗಾಗಿ ಸಂಸದರ ತಾಯಿ ಹೊರರೋಗಿ ವಿಭಾಗದಲ್ಲಿಯೇ ಕಾದು ಕುಳಿತಿದ್ದರು. ಈ ವಿಷಯ ತಿಳಿದು ಕುಪಿತರಾದ ಅನಂತಕುಮಾರ ಹೆಗಡೆ, ರಾತ್ರಿ 11ರ ಸುಮಾರಿಗೆ ಆಸ್ಪತ್ರೆಗೆ ಬಂದು, ‘ಸಂಸದರ ತಾಯಿಗೆ ಸರಿಯಾಗಿ ಚಿಕಿತ್ಸೆ ನೀಡದ ನೀವು ಸಾಮಾನ್ಯ ಜನರಿಗೆ ಹೇಗೆ ಸ್ಪಂದಿಸುತ್ತೀರಿ?’ ಎಂದು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಮಾತು ವಿಕೋಪಕ್ಕೆ ತಿರುಗಿ, ಡಾ. ಮಧುಕೇಶ್ವರ, ಡಾ. ಬಾಲಚಂದ್ರ ಭಟ್ಟ ಮತ್ತು ಸಿಬ್ಬಂದಿ ರಾಹುಲ್ ಮೇಲೆ ಹಲ್ಲೆ ನಡೆಸಿದರು. ಘಟನೆಯಲ್ಲಿ ಮೂವರಿಗೂ ಗಾಯಗಳಾಗಿವೆ.
**