ಶ್ರೀನಗರ : ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಶ್ರೀನಗರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯಶಾಲಿ ಆಗಿದ್ದಾರೆ.
ಫಾರೂಕ್ ಅವರು ತಮ್ಮ ಪ್ರತಿಸ್ಪರ್ಧಿ ಪಿಡಿಪಿ ಅಭ್ಯರ್ಥಿ ನಜೀರ್ ಖಾನ್ ಅವರನ್ನು 10,700 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಭಾರಿ ಹಿಂಸಾಚಾರ, ಸಾವು ನೋವುಗಳ ಮಧ್ಯೆ ಏಪ್ರಿಲ್ 9ರಂದು ಉಪ ಚುನಾವಣೆ ನಡೆದಿತ್ತು. ಆಗ ಶೇಕಡ 7.13ರಷ್ಟು ಮತದಾನ ಆಗಿತ್ತು.
ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಇಷ್ಟು ಕಡಿಮೆ ಮತದಾನ ಆಗಿರುವುದು ಚುನಾವಣಾ ಇತಿಹಾಸದಲ್ಲಿ ಇದೇ ಮೊದಲು.
ಹಿಂಸಾಚಾರ ನಡೆದ ಪ್ರದೇಶಗಳ 38 ಮತಗಟ್ಟೆಗಳಲ್ಲಿ ಚುನಾವಣಾ ಆಯೋಗವು ಏಪ್ರಿಲ್ 13ರಂದು ಮರು ಮತದಾನ ನಡೆಸಿತ್ತು. ಆಗ ಶೇ 2 ರಷ್ಟು ಜನರು ಮತ ಚಲಾಯಿಸಿದ್ದರು.
ಫಾರೂಕ್ ಅವರು ಮೂರನೇ ಬಾರಿಗೆ ಲೋಕಸಭೆಯನ್ನು ಪ್ರವೇಶಿಸು ತ್ತಿದ್ದು, ಆಡಳಿತಾರೂಢ ಪಿಡಿಪಿಗೆ ಈ ಚುನಾವಣೆಯ ಸೋಲಿನಿಂದ ಮುಖಭಂಗವಾಗಿದೆ.
ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯ: ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಲೇ ಫಾರೂಕ್ ಅಬ್ದುಲ್ಲಾ ಅವರು, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.