ಅಳ್ನಾವರ (ಧಾರವಾಡ ಜಿಲ್ಲೆ): ವಿದ್ಯುತ್ ಸ್ಪರ್ಶದಿಂದ ಅಸ್ವಸ್ಥಗೊಂಡಿದ್ದ ಯುವಕನಿಗೆ ಚಿಕಿತ್ಸೆ ಕೊಡಿಸಲು ಹೋಗಿದ್ದ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿದ್ದರಿಂದ ಕುಪಿತರಾದ ಸಂಬಂಧಿಕರು ಆಸ್ಪತ್ರೆಯ ಪೀಠೋಪಕರಣ, ಗಾಜುಗಳನ್ನು ಧ್ವಂಸಗೊಳಿಸಿ ಭಾನುವಾರ ದಾಂದಲೆ ನಡೆಸಿದ್ದಾರೆ.
ಇದರಿಂದ ಆಸ್ಪತ್ರೆಯಲ್ಲಿದ್ದ ಕಂಪ್ಯೂಟರ್ಗಳು, ಟಿ.ವಿ. ಧ್ವಂಸಗೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪೊಲೀಸರು ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಮುಂಬೈನಲ್ಲಿ ಗೌಂಡಿ ಕೆಲಸ ಮಾಡಿಕೊಂಡಿದ್ದ ಅನ್ವರ್ ಬಾಳೇಕುಂದ್ರಿ (26) ತಮ್ಮ ತಾಯಿಯ ಯೋಗಕ್ಷೇಮ ವಿಚಾರಿಸಲು ಊರಿಗೆ ಬಂದಿದ್ದರು. ನೆಹರೂ ನಗರದಲ್ಲಿ ನೆಲೆಸಿರುವ ಇವರು ಬೆಳಿಗ್ಗೆ ನಳಕ್ಕೆ ಮೋಟರ್ ಸಂಪರ್ಕ ಕಲ್ಪಿಸುವ ವೇಳೆ ವಿದ್ಯುತ್ ಸ್ಪರ್ಶದಿಂದ ಅಸ್ವಸ್ಥಗೊಂಡರು.
ಕೂಡಲೇ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ, ಕೇಂದ್ರಕ್ಕೆ ಬೀಗ ಹಾಕಲಾಗಿತ್ತು. ಅಷ್ಟರಲ್ಲಿ ಅನ್ವರ್ ಕೊನೆಯುಸಿರೆಳೆದಿದ್ದರು.
ಇದರಿಂದ ಕುಪಿತರಾದ ಸಂಬಂಧಿಕರು ಮತ್ತು ಸಾರ್ವಜನಿಕರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಕಲಾಗಿದ್ದ ಬೀಗ ಒಡೆದು ಒಳನುಗ್ಗಿದ್ದಾರೆ.
‘ಪ್ರತಿ ಭಾನುವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಲಾಗುತ್ತದೆ. ಪಟ್ಟಣದ ಜನತೆಗೆ ವೈದ್ಯರ ಸೇವೆ ದೊರಕುತ್ತಿಲ್ಲ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಲ್ಲವೆ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವವರೆಗೂ ಶವವನ್ನು ಕೊಂಡೊಯ್ಯುವುದಿಲ್ಲ’ ಎಂದು ಅನ್ವರ್ನ ಸಂಬಂಧಿಕರು ಪಟ್ಟುಹಿಡಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿಗೆ ಬಂದಿರುವುದರಿಂದ ಜಿಲ್ಲಾ ಆರೋಗ್ಯಾಧಿಕಾರಿ ಅವರೊಟ್ಟಿಗೆ ಇದ್ದಾರೆ. ಸೋಮವಾರ ಬೆಳಿಗ್ಗೆ ಅವರು ಪಟ್ಟಣಕ್ಕೆ ಬಂದು ಸಮಸ್ಯೆ ಬಗೆಹರಿಸಲಿದ್ದಾರೆ’ ಎಂದು ಪೊಲೀಸರು ಭರವಸೆ ನೀಡಿದ ಬಳಿಕ ಶವವನ್ನು ಕೊಂಡೊಯ್ಯಲಾಯಿತು.