‘ಶಾಲಿನಿ ರಜನೀಶ್ ಅವರು ಕಟ್ಟುನಿಟ್ಟಿನ ಮತ್ತು ದಿಟ್ಟ ಅಧಿಕಾರಿ. ಅವರು ಎಲ್ಲೆಲ್ಲಿ ಕೆಲಸ ಮಾಡಿದ್ದಾರೋ ಅಲ್ಲೆಲ್ಲ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿಯೇ ಬಂದಿದ್ದಾರೆ’ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಗಳುತ್ತಿದ್ದರೆ ವೇದಿಕೆಯ ಮೇಲೆ ಕೂತಿದ್ದ ಶಾಲಿನಿ ಅವರ ಕಣ್ಣುಗಳಲ್ಲಿ ಧನ್ಯತೆಯ ಹೊಳಪು. ಅದೇನೂ ಸನ್ಮಾನ ಸಮಾರಂಭವಲ್ಲ, ಯಾವುದೋ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೂ ಅಲ್ಲ. ಶಾಲಿನಿ ರಜನೀಶ್ ಅವರು ಬರೆದಿರುವ ‘ಡ್ರೀಮ್ಸ್ ಆಫ್ ಎ ಐ.ಎ.ಎಸ್ ಕಪಲ್’ ಎಂಬ ಪುಸ್ತಕ ಆಧರಿಸಿದ ‘ಶಾಲಿನಿ ಐ.ಎ.ಎಸ್’ ಸಿನಿಮಾದ ಮುಹೂರ್ತ ಸಂದರ್ಭದಲ್ಲಿ ಸಿದ್ದರಾಮಯ್ಯ ಮಾತನಾಡುತ್ತಿದ್ದರು.