ಲಖನೌ: ಹರಿದ್ವಾರಕ್ಕೆ ತೆರಳುತ್ತಿದ್ದ ಕಳಿಂಗ ಉತ್ಕಲ್ ಎಕ್ಸ್ಪ್ರೆಸ್ ರೈಲಿನ 14 ಬೋಗಿಗಳು ಉತ್ತರಪ್ರದೇಶದ ಮುಜಫ್ಫರ್ನಗರ ಬಳಿಯ ಖತೌಲಿ ಎಂಬಲ್ಲಿ ಹಳಿತಪ್ಪಿರುವ ದುರಂತದಲ್ಲಿ 156 ಜನ ಗಾಯಗೊಂಡಿದ್ದಾರೆ ಎಂದು ಉತ್ತರ ಪ್ರದೇಶದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ರೈಲು ಶನಿವಾರ ಹಳಿತಪ್ಪಿ ಸಂಭವಿಸಿರುವ ಘಟನೆಯಲ್ಲಿ 23 ಪ್ರಯಾಣಿಕರು ದಾರುಣವಾಗಿ ಸಾವಿಗೀಡಾಗಿದ್ದಾರೆ.
‘ಘಟನೆಯಲ್ಲಿ 156 ಜನ ಗಾಯಗೊಂಡಿದ್ದಾರೆ, ಹಲವರ ಸ್ಥಿತಿ ಗಂಭೀರವಾಗಿದೆ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅವರ ಮುಖ್ಯ ಕಾರ್ಯದರ್ಶಿ ಅವನೀಶ್ ಕುಮಾರ್ ಅವಸ್ತಿ ಹೇಳಿದ್ದಾರೆ.
‘ಉತ್ಕಲ್ ಎಕ್ಸ್ಪ್ರೆಸ್ ರೈಲು ಅಪಘಾತದಲ್ಲಿ ಒಟ್ಟು 156 ಮಂದಿ ಗಾಯಗೊಂಡಿದ್ದಾರೆ ಮತ್ತು ಅವರಲ್ಲಿ ಅನೇಕರ ಸ್ಥಿತಿ ತೀವ್ರ ಗಂಭೀರವಾಗಿದೆ’ ಎಂದು ಅವಸ್ತಿ ಅವರು ದೂರವಾಣಿಯಲ್ಲಿ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಘಟನೆಯಲ್ಲಿ 21 ಜನ ಮೃತಪಟ್ಟಿದ್ದು, 97 ಮಂದಿ ಗಾಯಗೊಂಡಿದ್ದಾರೆ, 26 ಜನರ ಸ್ಥಿತಿ ಗಂಭೀರವಾಗಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ಇಂದು ಬೆಳಿಗ್ಗೆ ತಿಳಿಸಿತ್ತು.
ಗಾಯಾಳುಗಳನ್ನು ಮುಜಫ್ಫರ್ನಗರ ಮತ್ತು ಮೀರತ್ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಹಳಿತಪ್ಪಿದ ರೈಲು ಬೋಗಿಗಳು ಮನೆಗಳ ಮೇಲೆ ಬಿದ್ದಿರುವುದರಿಂದ ಮನೆ ಗೋಡೆ ಹಾನಿಗೊಳಗಾಗಿದೆ.