ತಾಂಬಾ: ‘ದಾನ, ದಾಸೋಹ, ತತ್ವಾದರ್ಶ ಸಾರಿದ ಶರಣರ ನಾಡು ವಿಜಯಪುರ ಜಿಲ್ಲೆ ಈಗಲೂ ದಾನಿಗಳ ಜಿಲ್ಲೆ ಎಂಬ ಕೀರ್ತಿ ಉಳಿಸಿಕೊಂಡಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.
ಇಲ್ಲಿಗೆ ಸಮೀಪದ ಅಥರ್ಗಾ ಗ್ರಾಮದ ಶಿಕ್ಷಕ ರೇವಣಸಿದ್ಧೇಶ್ವರ ಮೂರ್ತಿ ಪ್ರತಿಷ್ಠಾಪನೆ, ವೃತ್ತ ಉದ್ಘಾಟಿಸಿ ಮಾತನಾಡಿದ ಅವರು ‘ಶರಣರ ಜೀವನ ಪಾಲಿಸಿದಲ್ಲಿ ಸಮಸ್ಯೆಗಳೆಂಬ ಕೊರಗು ಬಾಧಿಸುವುದಿಲ್ಲ’ ಎಂದರು.
ಸರ್ವರೂ ಸಮಾನರು ಎಂಬ ಹೃದಯ ವೈಶಾಲ್ಯತೆ, ವ್ಯಕ್ತಿತ್ವ ವಿಕಸನಕ್ಕೆ ಕಾರಣಿಕರ್ತರಾದ ಶಿಕ್ಷಕನ ದೇವಸ್ಥಾನಕ್ಕೆ ಶಾಸಕರ ಅನುದಾನದಲ್ಲಿ ₹ 5 ಲಕ್ಷ ಕೊಡುವುದಾಗಿ ಇದೇ ಸಂದರ್ಭ ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಬುರಾಣಾಪುರದ ಆರೂಢ ಮಠದ ಯೋಗೇಶ್ವರಿ ಮಾತಾ ಆಶೀರ್ವಚನ ನೀಡಿ ‘ಶಿಕ್ಷಕನ ಜಾತ್ರೆ ಮಾಡುವುದು ದೇಶದ ಇತಿಹಾಸದಲ್ಲಿ ಅದ್ಭುತ’ ಎಂದರು.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ ರಾಜ್ಯ–ರಾಷ್ಟ್ರ ಮಟ್ಟದಲ್ಲಿ ಶಿಕ್ಷಕ ರೇವಣಸಿದ್ಧೇಶ್ವರರ ಇತಿಹಾಸವನ್ನು ತಿಳಿಸುವ ಕೆಲಸ ನಡೆಯಬೇಕಿದೆ. ವಿಶ್ವಕ್ಕೆ ಇವರ ಆದರ್ಶ ಬೆಳಗಬೇಕು. ಶಿಕ್ಷಕನ ದೇವಸ್ಥಾನಕ್ಕೆ ₨ 3 ಲಕ್ಷ ಅನುದಾನ ನೀಡುವುದಾಗಿ ಇದೇ ಸಂದರ್ಭ ಪ್ರಕಟಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಟಿ.ತಳಕೇರಿ ಮಾತನಾಡಿದರು. ನಾಗಠಾಣದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಅಥರ್ಗಾ ಮುರುಘೇಂದ್ರ ಸ್ವಾಮೀಜಿ ವೀರಗೋಟಾ ಅಡವಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಮಹಾಲಿಂಗಪುರದ ಇಬ್ರಾಹಿಂ ಸುತಾರ ಮುಲ್ಲಾ ಜ್ಞಾನೋಪದೇಶ ನೀಡಿದರು.
ಶ್ರೀಶೈಲಗೌಡ ಬಿರಾದಾರ ಬಸ್ ಶೆಲ್ಟರ್ ಉದ್ಘಾಟಿಸಿದರು. ಅಪ್ಪುಗೌಡ ಪಾಟೀಲ ಮನಗೂಳಿ ಮೂರ್ತಿ ತುಲಾಭಾರ ನೆರವೇರಿಸಿದರು. ಚಂದ್ರಕಾಂತಗೌಡ ಬಿರಾದರ ಜ್ಯೋತಿ ಬೆಳಗಿಸಿದರು. ಸರ್ಕಲ್ ನಿರ್ಮಿಸಿದ ಶ್ರೀಶೈಲ ನಾಗಣಸೂರ ದಂಪತಿಗಳನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಗಣಪತಿ ಬಣಿಕೋಲ ಬಡಮಕ್ಕಳ ಶಿಕ್ಷಣಕ್ಕಾಗಿ 2100 ನೋಟಬುಕ್ ವಿತರಿಸಿದರು.
ಡಾ.ಆರ್.ಎಂ.ಅವರಸಂಗ, ಗಿರೀಶ ಚಾಂದಕವಟೆ, ದಯಾಸಗರ ಪಾಟೀಲ, ನಾಗುಗೌಡ ಪಾಟೀಲ, ವಿಜಯಲಕ್ಷ್ಮೀ ಬಾಳಿ, ಸಜ್ಜನ ತಾಳಿಕೋಟಿ, ಅಶೋಕಗೌಡ ಬಿರಾದಾರ, ಶಿವಾನಂದ ನಿಂಬಾಳ, ಸಿದ್ದು ಜೇವೂರ, ಗುರುಗೌಡ ಬಿರಾದಾರ, ಜಯರಾಮ ರಾಠೋಡ, ಪರಶುರಾಮ ಜಿಗಜಿಣಗಿ ಉಪಸ್ಥಿತರಿದ್ದರು. ಶಿಕ್ಷಕ ಎಸ್.ಎಸ್.ಅಂಕಲಗಿ ಸ್ವಾಗತಿಸಿದರು. ಆರ್.ಎಸ್.ಬಂಗಾರಿ ನಿರೂಪಿಸಿದರು. ಶಿಕ್ಷಕ ಎಚ್.ಎನ್.ಬಂಟನೂರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.