ಚಿಕ್ಕಬಳ್ಳಾಪುರ: ‘ದೇವರ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲದವರು ದೇವರ ಬಗ್ಗೆ ಗೊಂದಲ ಮೂಡಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇವರು ಗುಡಿಯಲ್ಲಿದ್ದಾನೆ ಎಂಬುದು ಕೂಡಾ ತಪ್ಪು ಕಲ್ಪನೆ. ದೇವರಿಗೆ ಶುದ್ಧ ಮನಸ್ಸು ಬೇಕು. ದೇವರು ಆಡಂಬರಗಳನ್ನು ಬಯಸುವುದಿಲ್ಲ. ನಾವು ಆತ್ಮಸಾಕ್ಷಿಯಂತೆ ನಡೆದುಕೊಂಡರೆ ಸಾಕು’ ಎಂದರು.
‘ನಾನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾತ್ರ ಧರ್ಮಸ್ಥಳಕ್ಕೆ ಹೋಗಿದ್ದೆ. ವೀರೇಂದ್ರ ಹೆಗ್ಗಡೆಯವರು ದೇವಸ್ಥಾನಕ್ಕೆ ಬರುವಂತೆ ಮನವಿ ಮಾಡಿದರು. ಹೀಗಾಗಿ ನಾನು ದೇವಸ್ಥಾನಕ್ಕೆ ಹೋಗಿದ್ದೆ’ ಎಂದು ಅವರು ಹೇಳಿದರು.
‘ಯಾವ ಆಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಬೇಕು ಎಂಬ ಕಟ್ಟುಪಾಡು ಸರಿಯಲ್ಲ. ಬೇಡರ ಕಣ್ಣಪ್ಪ ದೇವರಿಗೆ ಮಾಂಸವನ್ನೇ ನೈವೇದ್ಯವಾಗಿ ಅರ್ಪಿಸಿದ್ದ. ಆತ್ಮಶುದ್ಧವಾಗಿದ್ದರೆ ಅದೇ ಭಗವಂತನಿಗೆ ಅರ್ಪಿಸುವ ನೈವೇದ್ಯ’ ಎಂದರು.