ಮಡಿಕೇರಿ: ‘ಒಖಿ’ ಚಂಡಮಾರುತ ಕಾರಣದಿಂದ ಕೊಡಗು ಜಿಲ್ಲೆಯಲ್ಲೂ ಶುಕ್ರವಾರ ಮಳೆ ಸುರಿಯಿತು. ಜಿಲ್ಲೆಯ ಕೆಲವೆಡೆ ಮಧ್ಯಾಹ್ನದ ಬಳಿಕ ಧಾರಾಕಾರ ಮಳೆಯಾಗಿದೆ. ಉತ್ತರ ಕೊಡಗಿನಲ್ಲಿ ಮೋಡ ಕವಿದ ವಾತಾವರಣವಿದ್ದು ಕೆಲವುಕಡೆ ತುಂತುರು ಮಳೆಯಾದರೆ, ದಕ್ಷಿಣ ಕೊಡಗಿನಲ್ಲಿ ವರುಣ ಅಬ್ಬರಿಸಿತು.
ಜಿಲ್ಲೆಯಲ್ಲಿ ಭತ್ತ ಹಾಗೂ ಕಾಫಿ ಕೊಯ್ಲು ಆರಂಭವಾಗಿದ್ದು ಮಳೆ ಅಡ್ಡಿಪಡಿಸಿತು. ಇನ್ನೆರಡು ದಿನಗಳು ಇದೇ ವಾತಾವರಣ ಮುಂದುವರಿದರೆ ನಷ್ಟ ಉಂಟಾಗಲಿದೆ. ಕಾಫಿ ಹೆಣ್ಣು ನೆಲಕ್ಕೆ ಬಿದ್ದು ಹಾಳಾಗಲಿದೆ ಎಂದು ರೈತರು ಆತಂಕದಿಂದ ನುಡಿಯುತ್ತಾರೆ.
3ರಂದು ಹುತ್ತರಿ ನಡೆಯ ಲಿದ್ದು ಹಬ್ಬಕ್ಕೂ ವರುಣ ಅಡ್ಡಿ ಯಾಗುವ ಸಾಧ್ಯತೆಯಿದೆ. ಮಡಿಕೇರಿ, ನಾಪೋಕ್ಲು, ಭಾಗಮಂಡಲ, ಅಪ್ಪಂಗಳ ಹಾಗೂ ಯರವನಾಡಿನಲ್ಲಿ ಬೆಳಿಗ್ಗೆಯಿಂದಲೂ ಮೋಡ ಮುಸುಕಿದ ವಾತಾವರಣವಿತ್ತು.
ಸಂಜೆಯ ವೇಳೆ ಕೆಲ ಸಮಯ ಮಳೆ ಸುರಿಯಿತು. ಮಳೆಯೊಂದಿಗೆ ಗಾಳಿಯೂ ಜೋರಾಗಿ ಬೀಸುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಚಳಿಗಾಲದಲ್ಲೂ ವಾತಾವರಣ ಮಳೆಗಾಲ ನೆನಪಿಸುತ್ತಿದೆ. ಕೊಡೆ, ಸ್ವೆಟರ್, ಜರ್ಕಿನ್ ಹೊರಬಂದಿವೆ.
ತುಂತುರು ಮಳೆ
ಶನಿವಾರಸಂತೆ: ಪಟ್ಟಣ ಹಾಗೂ ಹೋಬಳಿಯಾದ್ಯಂತ ಶುಕ್ರವಾರ ಮೋಡ ಕವಿದ ವಾತಾವರಣವಿದ್ದು, ಆಗಾಗ ತುಂತುರು ಮಳೆಯಾಯಿತು. ರೈತರು, ಬೆಳೆಗಾರರು ಆತಂಕ ಕ್ಕೊಳಗಾಗಿದ್ದಾರೆ. ಕಾಫಿ ತೋಟಗಳಲ್ಲಿ ಹಣ್ಣು ಕೊಯ್ಯುವ ಕೆಲಸ ನಡೆಯುತ್ತಿದೆ. ಮೋಡ ಕವಿದ ವಾತಾವರಣದಿಂದಾಗಿ ಗಿಡಗಳಿಂದ ಹಣ್ಣುಗಳು ಉದುರುತ್ತಿವೆ. ಮೊದಲೇ ಕಾರ್ಮಿಕರ ಕೊರತೆ. ಜತೆಗೆ ಬಿಸಿಲಿಲ್ಲದ ಕಾರಣ ಕೊಯ್ಲು ಮಾಡಿದ ಹಣ್ಣುಗಳನ್ನು ಒಣಗಿಸಲಾಗುತ್ತಿಲ್ಲ ಎನ್ನುತ್ತಾರೆ ಬೆಳೆಗಾರರು.
ಗದ್ದೆಗಳಲ್ಲೂ ಭತ್ತ ಕೊಯ್ಲಿಗೆ ಬಂದಿದ್ದರೂ ಒಣಗಿಲ್ಲದಿರುವುದರಿಂದ ಕೊಯ್ಲು ಮಾಡಿದರೂ ಒಳಗಡೆ ಸಂಗ್ರಹಿಸುವಂತಿಲ್ಲ. ‘ಮಳೆ ಪ್ರಮಾಣ ಹೆಚ್ಚಾದರೆ ಎಂಬ ಆತಂಕದಿಂದ ಕೊಯ್ಲು ಮಾಡದೇ ವಿಧಿಯಿಲ್ಲವಾಗಿ ತಮಿಳುನಾಡಿನಿಂದ ಭತ್ತ ಕೊಯ್ಲು ಯಂತ್ರ ತರಿಸಿ ತರಾತುರಿಯಲ್ಲಿ ಕೊಯ್ಲು ಮಾಡಲಾಗುತ್ತಿದೆ. ಗಂಟೆಗೆ ₹ 2,600 ಬಾಡಿಗೆ ನೀಡಬೇಕಿದೆ’ ಎಂದು ಕೂಜಗೇರಿ ಗ್ರಾಮದ ರೈತ ಕೆ.ಟಿ.ಹರೀಶ್ ಬೇಸರ ವ್ಯಕ್ತಪಡಿಸಿದರು.
ಕೊಡ್ಲಿಪೇಟೆಯಲ್ಲಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಭತ್ತ ಕೊಯ್ಲು ಯಂತ್ರವನ್ನು ₹ 700 ದರದಲ್ಲಿ ಬಾಡಿಗೆ ಪಡೆದು ಕೆಲ ರೈತರು ಗದ್ದೆಗಳಲ್ಲಿ ಭತ್ತದ ಕೊಯ್ಲು ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.