ಬೆಂಗಳೂರು: ಹನುಮ ಜಯಂತಿ ವೇಳೆ ಶಾಂತಿ ಕದಡಿದ ಕಾರಣ ಸಂಸದ ಪ್ರತಾಪಸಿಂಹ ಅವರನ್ನು ಜಾಮೀನು ರಹಿತವಾಗಿ ಬಂಧಿಸಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವಿರುದ್ಧ ಮೊಕದ್ದಮೆ ದಾಖಲಿಸಬೇಕಿತ್ತು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಇವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಲ್ಲ ಎಂದು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಟೀಕಿಸಿದರು.
ಅಮಿತ್ ಷಾ ನಿರ್ದೇಶನದ ಮೇರೆಗೆ ಇಂತಹ ಹೋರಾಟ ಮಾಡಿದ್ದಾಗಿ ಪ್ರತಾಪಸಿಂಹ ಹೇಳಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಮಾಹಿತಿ ಆಧರಿಸಿ ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು ಎಂದು ಅವರು ಹೇಳಿದರು.
‘ಹಿಂದೆ ಬಿಜೆಪಿ ಸೇರಿ ಸರ್ಕಾರ ಮಾಡಿದಾಗ ಡಿ.ವಿ. ಸದಾನಂದ ಗೌಡರು ನ್ಯಾಯಾಲಯದ ಆದೇಶ ಉಲ್ಲಂಘಿಸಿ ದತ್ತ ಪೀಠಕ್ಕೆ ಹೋಗಿದ್ದರು. ಆಗ ಅವರನ್ನು ಬಂಧಿಸಿ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ನಾನು ಅಂದು ತೋರಿಸಿದ ಧೈರ್ಯವನ್ನು ಸಿದ್ದರಾಮಯ್ಯ ಪ್ರದರ್ಶಿಸಲಿಲ್ಲ. ಇದು ಸರ್ಕಾರದ ವೈಫಲ್ಯ’ ಎಂದು ಕುಮಾರಸ್ವಾಮಿ ಆರೋಪಿಸಿದರು.
‘ಹನುಮ ಜಯಂತಿ ಅಂಗವಾಗಿ ರಾಜ್ಯದ ಹಲವೆಡೆಗಳಲ್ಲಿ ಅಶಾಂತಿ ನಿರ್ಮಾಣವಾಗಿತ್ತು. ಇದು ನಿಜಕ್ಕೂ ಆಂಜನೇಯ ಸ್ವಾಮಿಗೆ ಮಾಡಿದ ಅಪಚಾರ. ಇವರು ನಿಜಕ್ಕೂ ಆಂಜನೇಯನ ಭಕ್ತರೇ ಆಗಿದ್ದರೆ, ದೇವರ ಮುಂದೆ ಹೇಗೆ ನಡೆದುಕೊಳ್ಳಬೇಕಿತ್ತೋ ಹಾಗೆ ನಡೆದುಕೊಂಡಿಲ್ಲ’ ಎಂದು ಟೀಕಿಸಿದರು.
‘ಎರಡೂ ರಾಷ್ಟ್ರೀಯ ಪಕ್ಷಗಳಿಗೆ ರಾಜ್ಯದ ಸಮಸ್ಯೆಗಳ ಬಗ್ಗೆ ಕಾಳಜಿ ಇಲ್ಲ ಎಂದು ಅವರು ಕಿಡಿಕಾರಿದರು.