ನವದೆಹಲಿ: ‘ಗುಜರಾತ್ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲುವು ಸಾಧಿಸಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇಲ್ಲಸಲ್ಲದ ಸುಳ್ಳು ಹಬ್ಬಿಸುತ್ತಿದ್ದಾರೆ’ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
‘ಕಾಂಗ್ರೆಸ್ ಮುಖಂಡರು ಮಣಿಶಂಕರ್ ಅಯ್ಯರ್ ಅವರ ಮನೆಯಲ್ಲಿ ಪಾಕಿಸ್ತಾನದ ನಾಯಕರೊಂದಿಗೆ ಸಭೆ ನಡೆಸಿರುವ ವರದಿಯಾಗಿದೆ. ಈ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು’ ಎಂದು ಮೋದಿ ಭಾನುವಾರ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಂಗ್, ‘ರಾಜಕೀಯ ಲಾಭಕ್ಕಾಗಿ ಮೋದಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಮೋದಿ ದೇಶದ ಜನರ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದ್ದಾರೆ.
‘ಗುಜರಾತ್ನಲ್ಲಿ ಬಿಜೆಪಿ ಸೋಲುವ ಭೀತಿಯಲ್ಲಿರುವ ಪ್ರಧಾನಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಅವರ ಹುದ್ದೆಗೆ ಘನತೆ ತರುವಂಥದ್ದಲ್ಲ’ ಎಂದು ಸಿಂಗ್ ತಿಳಿಸಿದ್ದಾರೆ.
‘ಮೋದಿ ತಮ್ಮ ಈ ಹೇಳಿಕೆ ಬಗ್ಗೆ ದೇಶದ ಜನರ ಕ್ಷಮೆ ಕೇಳುತ್ತಾರೆ ಎಂಬ ವಿಶ್ವಾಸವಿದೆ. ಈ ಮೂಲಕ ಅವರು ತಮ್ಮ ಹುದ್ದೆ ಹಾಗೂ ಪ್ರಧಾನಮಂತ್ರಿ ಕಾರ್ಯಾಲಯದ ಘನತೆಯನ್ನು ಕಾಪಾಡುತ್ತಾರೆ ಎಂದು ನಂಬಿದ್ದೇನೆ’ ಎಂದಿದ್ದಾರೆ.