ನವದೆಹಲಿ: ರಾಜ್ಯಸಭೆಯ ಸದಸ್ಯತ್ವದಿಂದ ತಮ್ಮನ್ನು ಅನರ್ಹಗೊಳಿಸಿ ಸಭಾಪತಿ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಜೆಡಿ(ಯು) ಮಾಜಿ ಅಧ್ಯಕ್ಷ ಶರದ್ ಯಾದವ್ ಅವರು ಮಂಗಳವಾರ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಯಾದವ್ ಪರ ವಕೀಲ ನಿಜಾಂ ಪಾಶಾ ಹೈಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ, ‘ಆದೇಶ ಹೊರಡಿಸುವ ಮೊದಲು, ವಿವರಣೆ ನೀಡಲು ಅಧಿಕಾರಿಗಳು ತಮಗೆ ಅವಕಾಶ ಕೊಟ್ಟಿಲ್ಲ’ ಎಂದು ಯಾದವ್ ಹೇಳಿರುವುದಾಗಿ ಉಲ್ಲೇಖಿಸಲಾಗಿದೆ.
ಆರ್ಜೆಡಿ, ಕಾಂಗ್ರೆಸ್ ಜತೆಗಿನ ಮಹಾಮೈತ್ರಿಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತ್ಯಜಿಸಿದ ಬಳಿಕ ಯಾದವ್ ಅವರು ವಿರೋಧ ಪಕ್ಷದ ಜತೆ ಕೈಜೋಡಿಸಿದ್ದರು ಎಂದು ಆರೋಪಿಸಲಾಗಿತ್ತು. ಡಿ.4ರಂದು ಯಾದವ್ ಅವರನ್ನು ರಾಜ್ಯಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು.