ನವದೆಹಲಿ: ತ್ರಿವಳಿ ತಲಾಖ್ ನಿಷೇಧ ಮಸೂದೆಗೆ ಕೇಂದ್ರದ ಸಚಿವ ಸಂಪುಟ ಶುಕ್ರವಾರ ಒಪ್ಪಿಗೆ ನೀಡಿದ್ದು, ಮಸೂದೆಯನ್ನು ಶುಕ್ರವಾರದಿಂದ ಆರಂಭವಾಗಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತ್ರಿವಳಿ ತಲಾಖ್ ನಿಷೇಧ ಮಸೂದೆಗೆ ಒಪ್ಪಿಗೆ ನೀಡಲಾಯಿತು.
ಮುಸ್ಲಿಂ ಪುರುಷರು ಮೂರು ಬಾರಿ ತಲಾಖ್ (ತ್ರಿವಳಿ ತಲಾಖ್) ಹೇಳುವ ಮೂಲಕ ಪತ್ನಿಗೆ ವಿಚ್ಛೇದನ ನೀಡುವುದನ್ನು ಅಪರಾಧ ಎಂದು ಈ ಮಸೂದೆಯಲ್ಲಿ ಪರಿಗಣಿಸಲಾಗಿದೆ.
ಕಳೆದ ಆಗಸ್ಟ್ 22ರಂದು ಸುಪ್ರೀಂ ಕೋರ್ಟ್ ‘ತ್ರಿವಳಿ ತಲಾಖ್’ ಅಸಂವಿಧಾನಿಕ ಎಂದು ಹೇಳುವ ಮೂಲಕ ಈ ಪದ್ಧತಿಯನ್ನು ರದ್ದುಪಡಿಸಿತ್ತು. ಈ ಸಂಬಂಧ ಶಾಸನ ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು.
ಕೇಂದ್ರದ ಕಾನೂನು ಇಲಾಖೆ ‘ತ್ರಿವಳಿ ತಲಾಖ್ ತಿದ್ದುಪಡಿ ಮಸೂದೆ’ಯನ್ನು ಸಿದ್ಧಪಡಿಸಿತ್ತು. ಕಳೆದ ತಿಂಗಳು ತ್ರಿವಳಿ ತಲಾಖ್ ನಿಷೇಧ ಕರಡು ಮಸೂದೆಯನ್ನು ಎಲ್ಲಾ ರಾಜ್ಯ ಸರ್ಕಾರಗಳಿಗೆ ರವಾನಿಸಿದ್ದ ಕೇಂದ್ರ ಸರ್ಕಾರ ಅಭಿಪ್ರಾಯ ತಿಳಿಸುವಂತೆ ಕೋರಿತ್ತು.