ಚಿತ್ರದುರ್ಗ: ‘ಮುಂಬರುವ ಚುನಾವಣೆಯಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಸ್ಪರ್ಧಿಸಲು ನಾನೂ ಟಿಕೆಟ್ ಆಕಾಂಕ್ಷಿ’ ಎಂದು ಮಾಜಿ ಶಾಸಕ ಎ.ವಿ.ಉಮಾಪತಿ ತಿಳಿಸಿದರು.
‘ಹೊಳಲ್ಕೆರೆ ವಿಧಾನಸಭಾ ಕ್ಷೇತ್ರವೂ ಮೀಸಲಾತಿ ಆದ ನಂತರ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೆ ಎಂದ ಅವರು, ನನಗೆ ಈ ಕ್ಷೇತ್ರ ಹೊಸದಲ್ಲ’ ಎಂದು ಇಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಎರಡು ಬಾರಿ ಶಾಸಕನಾಗಿದ್ದೇನೆ. ಅಲ್ಲದೆ, ಎರಡೂ ಬಾರಿ ಸೋಲು ಅನುಭವಿಸಿದ್ದೇನೆ. ಉಮಾಪತಿ ಯಾರೆಂದು ಜಿಲ್ಲೆಯ ಜನರಿಗೆ ಗೊತ್ತಿದೆ. ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ನನಗೆ ಕಷ್ಟವೇನಲ್ಲ. ಚುನಾವಣೆಯಲ್ಲಿ ಜಾತಿಗಿಂತಲೂ ಜನಪ್ರಿಯತೆ ಅತ್ಯಂತ ಮುಖ್ಯ’ ಎಂದರು.
‘25 ವರ್ಷದಿಂದ ಕಾಂಗ್ರೆಸ್ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ನನಗೆ ರಾಜಕೀಯದಲ್ಲಿ ಸಾಕಷ್ಟು ಅನುಭವ ಇದೆ. ಅದೇ ರೀತಿ ಸ್ಪರ್ಧಿಸುವ ಆಕಾಂಕ್ಷಿಗಳೂ ಸಾಕಷ್ಟು ಮಂದಿ ಇದ್ದಾರೆ. ಅದರಲ್ಲಿ ನಾನೂ ಒಬ್ಬ’ ಎಂದು ತಿಳಿಸಿದರು.
‘ಈ ಬಾರಿ ಪಕ್ಷದ ಮುಖಂಡರಿಗೆ ಟಿಕೆಟ್ ನೀಡುವಂತೆ ಕೋರಿದ್ದೇನೆ. ಇಲ್ಲದಿದ್ದರೆ, ಯಾವ ಆಕಾಂಕ್ಷಿಗೆ ಪಕ್ಷದಿಂದ ಟಿಕೆಟ್ ಸಿಗುತ್ತದೋ ಅವರ ಗೆಲುವಿಗಾಗಿ ಕಾರ್ಯಕರ್ತನಾಗಿ ಶ್ರಮಿಸುತ್ತೇನೆ’ ಎಂದು ಹೇಳಿದರು.